ADVERTISEMENT

ಹಸಿವು ಅಂದ್ರೇನು ಅಂತ ನಾರಾಯಣ ಮೂರ್ತಿಗೆ ಗೊತ್ತಿಲ್ಲ: ಸಚಿವ ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2023, 12:29 IST
Last Updated 3 ಡಿಸೆಂಬರ್ 2023, 12:29 IST
   

ಹೊಸಪೇಟೆ: ‘ಇನ್ಫೊಸಿಸ್‌ ಸಂಸ್ಥಾಪಕರಲ್ಲಿ ಒಬ್ಬರಾದ ನಾರಾಯಣಮೂರ್ತಿ ಅವರಿಗೆ ಹಸಿವು ಅಂದರೇನು ಅಂತ ಗೊತ್ತಿಲ್ಲ. ಅದಕ್ಕಾಗಿಯೇ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದಾರೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು.

ಕರ್ನಾಟಕ ರಾಜ್ಯ ಚಲವಾದಿ ಮಹಾಸಭಾ ವತಿಯಿಂದ ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಮಾನತೆ, ಸಮಾನ ಅವಕಾಶ, ಸಾಮಾಜಿಕ ನ್ಯಾಯ, ಸಂವಿಧಾನದ ಆಶಯಗಳ ಬಗ್ಗೆ ಗೊತ್ತಿರುವ ಹಾಗೆ ಮಾತನಾಡುತ್ತಾರೆ. ಅವರಿಗೆ ಸಂವಿಧಾನ ಅರ್ಥವೇ ಆಗಿಲ್ಲ. ಇವರು ಮಾತ್ರ ಇದ್ದ ಜಮೀನನ್ನು ಕಡಿಮೆ ದುಡ್ಡಿಗೆ ಅಥವಾ ದುಡ್ಡು ಕೊಡದೆ ಹೊಡ್ಕೊಂಡ್ರು, ಬಡವರಿಗೆ ಮಾತ್ರ ಏನೂ ಕೊಡಬೇಡಿ ಅಂತಾರೆ’ ಎಂದು ಖಾರವಾಗಿ ನುಡಿದರು.

‘ಉದ್ಯಮಿಗಳಿಗೆ ಒಂದು ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡುವಾಗ ಮಾತನಾಡದ ಇವರಿಗೆ ಈ ಗ್ಯಾರಂಟಿ ಕೊಡುವಾಗ ಏಕೆ ಇಷ್ಟು ಕಣ್ಣುರಿ? ಎಷ್ಟೇ ಟೀಕೆ ಬರಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ ಇದ್ಯಾವುದಕ್ಕೂ ಸೊಪ್ಪು ಹಾಕುವುದಿಲ್ಲ’ ಎಂದು ಮಹದೇವಪ್ಪ ಸ್ಪಷ್ಟಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.