ADVERTISEMENT

ಪ್ರಧಾನಿಗಾಗಿ ಹಂಪಿಯಲ್ಲಿ ಜಗ್ಗೇಶ್‌ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2024, 5:51 IST
Last Updated 19 ಮಾರ್ಚ್ 2024, 5:51 IST
ಸೋಮವಾರ ಹಂಪಿಗೆ ಬಂದ ನಟ ಜಗ್ಗೇಶ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಲ್ಲಿ ವಿರೂಪಾಕ್ಷ ಸಹಿತ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿದರು
ಸೋಮವಾರ ಹಂಪಿಗೆ ಬಂದ ನಟ ಜಗ್ಗೇಶ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಲ್ಲಿ ವಿರೂಪಾಕ್ಷ ಸಹಿತ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿದರು    

ಹೊಸಪೇಟೆ (ವಿಜಯನಗರ): ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್‌ ಅವರು ಸೋಮವಾರ ಹಂಪಿಯ ಯಂತ್ರೋದ್ಧಾರಕ, ವಿರೂಪಾಕ್ಷ, ಭುವನೇಶ್ವರಿ ದೇವಸ್ಥಾನ ಸಹಿತ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ, ಪ್ರಧಾನಿ ಮೋದಿ ಅವರಿಗಾಗಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.

‘ದೇಶಕ್ಕೆ ಸುಭಿಕ್ಷವಾಗಲಿ, ಬರಗಾಲ ದೂರವಾಗಲಿ, ಮೋದಿಗೆ ದೇಶಾಭಿಷೇಕವಾಗಲಿ‘ ಎಂದು ಜಗ್ಗೇಶ್‌ ಅವರು ಎಲ್ಲಾ  ದೇವಸ್ಥಾನಗಳಲ್ಲಿ ಸಂಕಲ್ಪ ಮಾಡಿಸಿ ಪೂಜೆ ನೆರವೇರಿಸಿದರು.

ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನದಲ್ಲಿ ವಾಯುಸ್ತುತಿ ಪುನಶ್ಚರಣ ಸೇವೆ ಮಾಡಿಸಿದ ಅವರು, ಕೋದಂಡರಾಮ ದೇವಸ್ಥಾನಕ್ಕೂ ಹೋದರು. ವಿರೂಪಾಕ್ಷ ದೇವಸ್ಥಾನದಲ್ಲಿ ವಿರೂಪಾಕ್ಷನಿಗೆ, ಭುವನೇಶ್ವರಿಗೆ ಹಾಗೂ ಪಂಪಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದರು. ಕನ್ನಡಾಂಬೆ ಭುವನೇಶ್ವರಿಯನ್ನು ಕಂಡು ಮಹದಾನಂದವಾಯಿತು ಎಂದು ಉದ್ಘರಿಸಿದರು. ಪಟ್ಟದ ಆನೆ ಲಕ್ಷ್ಮಿಗೆ ಹಣ್ಣು ತಿನ್ನಿಸಿದರು.

ADVERTISEMENT

ಬಳಿಕ ಚಕ್ರತೀರ್ಥ ಮೂಲಕ ತೆಪ್ಪದಲ್ಲಿ ನವಬೃಂದಾವನಕ್ಕೆ ತೆರಳಿ ಮೋದಿಗಾಗಿ ಪ್ರಾರ್ಥನೆ ಸಲ್ಲಿಸಿದರು.

‘ನಾನು ಇದುವರೆಗೆ ಗೋಪ್ಯವಾಗಿ ಇಲ್ಲಿಗೆ ಬಂದು ಹೋಗುತ್ತಿದ್ದೆ. ನಿನ್ನೆ ನನ್ನ ಜನ್ಮದಿನವನ್ನು ಮಂತ್ರಾಲಯದ ರಾಯರ ಮಠದಲ್ಲಿ ಆಚರಿಸಿಕೊಂಡೆ. ಕ್ಷಾತ್ರ ತೇಜಸ್ಸಿನ ಕ್ಷೇತ್ರವಾಗಿರುವ ಹಂಪಿಯಲ್ಲಿ ಪ್ರಧಾನಿ ಮೋದಿ ಅವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಅವಕಾಶ ಒದಗಿದ್ದರಿಂದ ಖುಷಿಯಾಗಿದೆ. ಅವರ ಸಲುವಾಗಿಯೇ ಈ ಬಾರಿ ಬಹಿರಂಗವಾಗಿ ಕಾಣಿಸಿಕೊಂಡು ದೇವರ ಸೇವೆ ಮಾಡಿಸಿರುವೆ’ ಎಂದು ಅವರು ಬಳಿಕ ಮಾಧ್ಯಮದವರಿಗೆ ತಿಳಿಸಿದರು.

ಚಂದ್ರಕಾಂತ್ ಕಾಮತ್‌, ಪ್ರದೀಪ್‌, ಕಟಿಗಿ ಸಚಿನ್‌ ಇತರರು ಜತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.