ADVERTISEMENT

ಕಲಾವಿದರ ಕಡೆಗಣನೆ; ಜಾನಪದ ಅಕಾಡೆಮಿಯ ಸುದ್ದಿಗೋಷ್ಠಿಯಲ್ಲೇ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 5:46 IST
Last Updated 7 ಏಪ್ರಿಲ್ 2022, 5:46 IST
   

ಹೊಸಪೇಟೆ (ವಿಜಯನಗರ): ಕಲಾವಿದರನ್ನು ಕಡೆಗಣಿಸಿ ಕೆಲವರಿಗಷ್ಟೇ ಮಣೆ ಹಾಕಲಾಗಿದೆ ಎಂದು ಆರೋಪಿಸಿ ಗಾಯಕರಿಬ್ಬರೂ ಗುರುವಾರ ನಗರದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ಸುದ್ದಿಗೋಷ್ಠಿಯಲ್ಲೇ ಅಸಮಾಧಾನ ಹೊರ ಹಾಕಿದರು.

ಅಕಾಡೆಮಿಯ ಅಧ್ಯಕ್ಷೆ ಮಾತಾ ಬಿ. ಮಂಜಮ್ಮ ಜೋಗತಿ, ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್ ಭೋಯರ್ ನಾರಾಯಣರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ, ಅಕಾಡೆಮಿ ಸದಸ್ಯ ಚಂದ್ರಶೇಖರ್ ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಗಾಯಕರಾದ ಮಾರುತಿ, ಅನುರಾಧಾ ಅವರು, ಕಲಾವಿದರ ನಡುವೆ ತಾರತಮ್ಯ ಮಾಡಲಾಗಿದೆ. ನಿಮಗೆ ಬೇಕಾದವರಿಗೆ ಮಣೆ ಹಾಕಿದ್ದೀರಿ. ಕನ್ನಡ ಸಂಸ್ಕೃತಿ ಇಲಾಖೆಯವರು ಮೊದಲಿನಿಂದಲೂ ಕೆಲ ಕಲಾವಿದರಿಗೆ ಅವಕಾಶ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಮಂಜಮ್ಮ ಜೋಗತಿ ಮಾತನಾಡಿ, ಇದು ಅಕಾಡೆಮಿಯ ಕಾರ್ಯಕ್ರಮ. ರಾಜ್ಯದ ಎಲ್ಲ ಕಲಾವಿದರು ಭಾಗವಹಿಸುತ್ತಾರೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಾಗುವುದಿಲ್ಲ ಎಂದರು.

ADVERTISEMENT

ಸಿದ್ದಲಿಂಗೇಶ್ ರಂಗಣ್ಣನವರ್, ಇದು ನನಗೆ ಸಂಬಂಧಿಸಿದ್ದಲ್ಲ. ಅಕಾಡೆಮಿಯವರೇ ಕಲಾವಿದರ ಆಯ್ಕೆ ಮಾಡಿದ್ದಾರೆ ಎಂದರು. ಈ ನಡುವೆ ಜಿಪಂ ಸಿಇಒ ಎದ್ದು ಹೋದರು.

ಇದಕ್ಕೂ ಮುನ್ನ ಮಂಜಮ್ಮ ಜೋಗತಿ ಮಾತನಾಡಿ, ಏ. 9,10ರಂದು ನಗರದಲ್ಲಿ ಜಾನಪದ ಸಂಭ್ರಮ, ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ, ಪುಸ್ತಕ ಬಹುಮಾನ ವಿತರಣೆ ಸಮಾರಂಭ ಹೊಸಪೇಟೆಯಲ್ಲಿ ನಡೆಯಲಿದೆ. ಮೊದಲ ದಿನ ಕಲಾ ತಂಡಗಳ ಮೆರವಣಿಗೆ, ಎರಡನೇ ದಿನ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಮಾಹಿತಿ ಹಂಚಿಕೊಂಡರು.

ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.