ಹೊಸಪೇಟೆ (ವಿಜಯನಗರ): ‘ವ್ಯಕ್ತಿಯೊಬ್ಬರ ಹೆಸರಲ್ಲಿ ₹5.25 ಕೋಟಿ ಮೊತ್ತದ ಅಪಘಾತ ವಿಮೆ ಮತ್ತು ಇತರೆ ವಿಮೆ ಮಾಡಿಸಿ, ವಿಮಾ ಮೊತ್ತ ಪಡೆಯುವ ದುರುದ್ದೇಶದಿಂದ ಆತನನ್ನು ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ ಪ್ರಕರಣ ಇಲ್ಲಿ ನಡೆದಿದೆ. ಈ ಸಂಬಂಧ ಆರು ಜನರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ತಿಳಿಸಿದರು.
‘ನಗರದ ಕೌಲ್ಪೇಟೆ ನಿವಾಸಿ ಕೆ.ಗಂಗಾಧರ ಸೆಪ್ಟೆಂಬರ್ 28ರಂದು ಎಚ್ಎಲ್ಸಿ ಕಾಲುವೆಯಲ್ಲಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿತ್ತು. ಈ ಸಾವಿನ ಕುರಿತು ಅವರ ಪತ್ನಿ ಕೆ.ಶಾರದಮ್ಮ ಅವರು ಪಟ್ಟಣದ ಠಾಣೆಯಲ್ಲಿ ದೂರು ನೀಡಿದ್ದರು. ಮೂರು ತಂಡ ರಚಿಸಿ ತನಖೆ ನಡೆಸಿದಾಗ ಆರೋಪಿಗಳ ಸಂಚು ಬಯಲಾಗಿದೆ’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಗಂಗಾಧರ ಅವರಿಗೆ ತೀವ್ರ ಅನಾರೋಗ್ಯ, ಆರ್ಥಿಕ ಸಂಕಷ್ಟ ಕಾಡುತಿತ್ತು. ಅವರ ಪರಿಸ್ಥಿತಿಯ ಲಾಭ ಪಡೆಯಲು ಆರು ಜನರು ಸಂಚು ರೂಪಿಸಿದರು. ಅವರಿಗೆ ಮದುವೆಯಾಗಿದ್ದರೂ ಬೇರೊಬ್ಬ ಮಹಿಳೆಯನ್ನು ಪತ್ನಿ ಎಂದು ನಮೂದಿಸಿ ಉಪನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ್ದರು. ಗಂಗಾಧರನ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು, ನಕಲಿ ನಾಮಿನಿ ಸೃಷ್ಟಿಸಿದ್ದರು. ವಿವಿಧ ವಿಮಾ ಕಂಪನಿಗಳಲ್ಲಿ ₹5.25 ಕೋಟಿ ಮೊತ್ತದ ಅಪಘಾತ ವಿಮೆ, ಇತರೆ ವಿಮೆಯ ಆರು ಪಾಲಿಸಿಗಳನ್ನು ಮಾಡಿಸಿ ಆರೋಪಿಗಳೇ ಪ್ರೀಮಿಯಂ ಹಣ ತುಂಬಿದ್ದರು. ಆದರೆ, ಅವರು ಬೇಗನೇ ಮೃತಪಡದ ಕಾರಣ ಕೆಲ ಪಾಲಿಸಿಗಳು ತಿರಸ್ಕೃತಗೊಂಡವು. ಹೀಗಾಗಿ ಅಪಘಾತ ವಿಮೆ ಪಾಲಿಸಿಯ ಹಣವನ್ನು ಪಡೆಯಲು ವ್ಯಕ್ತಿಯನ್ನು ಕೊಲೆ ಮಾಡಿ, ಅಪಘಾತ ಎಂದು ಬಿಂಬಿಸಿದ್ದರು’ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.