ADVERTISEMENT

ಬಸ್ ಸೇವೆ ಸಂಪೂರ್ಣ ಸ್ಥಗಿತ; ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ

ಬಸ್ ನಿಲ್ದಾಣದಿಂದ ಖಾಸಗಿ ವಾಹನ ಸಂಚಾರ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 6:04 IST
Last Updated 7 ಏಪ್ರಿಲ್ 2021, 6:04 IST
ನೌಕರರ ಮುಷ್ಕರ
ನೌಕರರ ಮುಷ್ಕರ   

ಹೊಸಪೇಟೆ (ವಿಜಯನಗರ): ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ತರಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಷ್ಕರವನ್ನು ಬೆಂಬಲಿಸಿ ಸಾರಿಗೆ ಸಂಸ್ಥೆ ನೌಕರರು ಮಂಗಳವಾರ ಮಧ್ಯರಾತ್ರಿಯಿಂದಲೇ ಎಲ್ಲ ಸೇವೆ ಸ್ಥಗಿತಗೊಳಿಸಿದ್ದಾರೆ. ನಗರ ನಿಲ್ದಾಣದಿಂದ ಪರ ಊರುಗಳಿಗೆ ತೆರಳಿದ್ದ ವಾಹನಗಳು ರಾತ್ರಿ ಹಿಂತಿರುಗಿದವು. ದೂರದ ಊರುಗಳಿಗೆ ತೆರಳಿದ್ದ ಬಸ್ ಗಳು ಹಿಂತಿರುಗಿಲ್ಲ.

ನಗರ ಸಾರಿಗೆ ಸೇರಿದಂತೆ ಎಲ್ಲ ರೀತಿಯ ಬಸ್ ಸಂಚಾರ ನಿಂತಿರುವುದರಿಂದ ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ. ಮ್ಯಾಕ್ಸಿ ಕ್ಯಾಬ್, ಟಂ ಟಂ, ಕ್ರೂಸರ್ ವಾಹನಗಳು ನಗರದ ಕೇಂದ್ರ ಬಸ್ ನಿಲ್ದಾಣದಿಂದಲೇ ಸಂಚಾರ ನಡೆಸುತ್ತಿವೆ. ಆದರೆ, ಖಾಸಗಿ ವಾಹನಗಳು, ಜನರು ಹೆಚ್ಚಾಗಿ ಓಡಾಡುವ ಕಡೆ, ತಾಲ್ಲೂಕು ಕೇಂದ್ರಗಳಿಗೆ ಸೀಮಿತವಾಗಿ ಸಂಚಾರ ಬೆಳೆಸುತ್ತಿರುವುದರಿಂದ ಜನರಿಗೆ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ.

ADVERTISEMENT

ಮುಂಚಿತವಾಗಿಯೇ ಮುಷ್ಕರ ನಡೆಸುವ ವಿಷಯ ತಿಳಿದು ಅನೇಕರು ದ್ವಿಚಕ್ರ ವಾಹನ, ಸ್ನೇಹಿತರ ಕಾರುಗಳಲ್ಲಿ ದೈನಂದಿನ ಕೆಲಸಗಳಿಗೆ ತೆರಳಿದರು. ಕಾರ್ಯ ನಿಮಿತ್ತ ದೂರದ ಊರುಗಳಿಗೆ ಹೋಗಬೇಕಿದ್ದವರು ಮನೆಗಳಿಗೆ ಹಿಂತಿರುಗಿದರು. ತಡರಾತ್ರಿ ನಿಲ್ದಾಣಕ್ಕೆ ಬಂದಿದ್ದ ಕೆಲ ಪ್ರಯಾಣಿಕರು ಅವರ ಊರುಗಳಿಗೆ ಹೋಗಲಾಗದೆ ನಿಲ್ದಾಣದಲ್ಲೇ ನಿದ್ರೆಗೆ ಜಾರಿದ್ದರು.

ಜಿಲ್ಲೆಯ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೊಟ್ಟೂರು ಹಾಗೂ ಹರಪನಹಳ್ಳಿಯಲ್ಲೂ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.