ADVERTISEMENT

ಕುರುಬ ಸಮುದಾಯ STಗೆ ಸೇರಿಸುವ ಪ್ರಸ್ತಾವಕ್ಕೆ ವಿರೋಧ: ವಾಲ್ಮೀಕಿ ಜಯಂತಿ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 10:26 IST
Last Updated 5 ಅಕ್ಟೋಬರ್ 2025, 10:26 IST
   

ಹೊಸಪೇಟೆ (ವಿಜಯನಗರ): ಪರಿಶಿಷ್ಟ ಪಂಗಡಕ್ಕೆ ಕುರುಬ ಸಮುದಾಯವನ್ನು ಸೇರಿಸುವ ಪ್ರಸ್ತಾವವನ್ನು ಕೈಬಿಡುವುದಾಗಿ ರಾಜ್ಯ ಸರ್ಕಾರ ಇದುವರೆಗೆ ಹೇಳಿಲ್ಲದ ಕಾರಣ ಇದೇ 7ರಂದು ಸರ್ಕಾರದ ವತಿಯಿಂದ ನಡೆಯುವ ವಾಲ್ಮೀಕಿ ಜಯಂತಿಯನ್ನು ಬಹಿಷ್ಕರಿಸಲು ಹೊಸಪೇಟೆ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದವರು ನಿರ್ಧರಿಸಿದ್ದಾರೆ.

ಸಮಾಜದ ಅಧ್ಯಕ್ಷ ಗೋಸಲ ಭರಮಪ್ಪ ಅವರು ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಸಮಾಜದ ಎಲ್ಲಾ ಯಜಮಾನರು ತೀರ್ಮಾನಿಸಿದಂತೆ ವಾಲ್ಮೀಕಿ ಜಯಂತಿಯನ್ನು ಬಹಿಷ್ಕರಿಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಲಾಗಿದೆ. ಅ.7ರ ನಂತರ ಸಮಾಜದ ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

ರಾಜನಹಳ್ಳಿ ಪೀಠದ ಸ್ವಾಮೀಜಿ ಅವರು ಸಹ ಸರ್ಕಾರದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು ಎಂಬುದು ನಮ್ಮ ಒತ್ತಾಯ. ಈ ನಿಟ್ಟಿನಲ್ಲಿ ಅವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತೇವೆ ಎಂದರು.

ADVERTISEMENT

ಶಾಸಕರು, ಸಂಸದರು ರಾಜೀನಾಮೆ ನೀಡಲಿ:

ಕುರುಬ ಸಮುದಾಯ ಎಸ್‌ಟಿಗೆ ಸೇರ್ಪಡೆಯಾದರೆ ವಾಲ್ಮೀಕಿ ಸಮುದಾಯದ ಯುವಕರ ಭವಿಷ್ಯ ಮಣ್ಣುಪಾಲಾಗಲಿದೆ. ಮೀಸಲಾತಿಯ ಸೌಲಭ್ಯ ದೊಡ್ಡ ಸಮುದಾಯವಾದ ಕುರುಬರಿಗಷ್ಟೇ ಸಿಗಲಿದೆ. ಇದು ಸಮಾಜದ ಭವಿಷ್ಯದ ಪ್ರಶ್ನೆಯಾಗಿರುವ ಕಾರಣ ಸಮಾಜದ ಎಲ್ಲಾ ಶಾಸಕರು, ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಈ ನಿಟ್ಟಿನಲ್ಲಿ ನಮ್ಮ ಒತ್ತಡ ತಂತ್ರ ಮುಂದುವರಿಯಲಿದೆ ಎಂದು ಸಮಾಜದ ಪ್ರಧಾನ ಕಾರ್ಯದರ್ಶಿ ದೇವರಮನೆ ಶ್ರೀನಿವಾಸ್ ಹೇಳಿದರು.

‘ವಿವಾದ ಭುಗಿಲೆದ್ದ ಬಳಿಕ ಸಮಾಜದ ಜನಪ್ರತಿನಿಧಿಗಳು ಸೊಲ್ಲೆತ್ತುತ್ತಿಲ್ಲ. ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಸದ್ಯ ವಿರೋಧ ಪಕ್ಷದಲ್ಲಿದ್ದು, ಅವರು ಸಹ ಸರ್ಕಾರದ ಧೋರಣೆ ವಿರೋಧಿಸಿ ಬಹಿರಂಗ ಹೇಳಿಕೆ ನೀಡಿಲ್ಲ. ಇದೆಲ್ಲ ನೋಡಿದರೆ ಸಮಾಜದಿಂದ ಆಯ್ಕೆಯಾಗಿ ಹೋದ ಜನಪ್ರತಿನಿಧಿಗಳು ಉಪಕಾರ ಸ್ಮರಣೆಯನ್ನು ಮರೆತಿರುವುದು ಕಾಣಿಸುತ್ತಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಅವರೆಲ್ಲ ದೊಡ್ಡ ಬೆಲೆಯನ್ನು  ತೆರಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು.

ವಾಲ್ಮೀಕಿ ಕಡೆಗಣನೆ ಇಲ್ಲ:

ರಾಮಾಯಣ ಬರೆದ ವಾಲ್ಮೀಕಿ ಮಹರ್ಷಿ ನಮ್ಮ ಮಹಾನ್‌ ಗುರುಗಳು. ನಾವು ಅವರ ಜಯಂತಿ ಕಡೆಗಣಿಸುತ್ತಿಲ್ಲ. ಖಾಸಗಿಯಾಗಿ ನಾವೆಲ್ಲ ಜಯಂತಿ ಆಚರಿಸುತ್ತೇವೆ. ಸರ್ಕಾರದಿಂದ ಆಚರಣೆ ಆರಂಭವಾಗಿ ಕೆಲ ವರ್ಷಗಳಷ್ಟೇ ಆಗಿವೆ.  ಅದಕ್ಕಿಂತ ಮೊದಲು 20ಕ್ಕೂ ಅಧಿಕ ವರ್ಷಗಳಿಂದ ನಾವೇ ಅದ್ಧೂರಿಯಾಗಿ ಜಯಂತಿ ಆಚರಣೆ ಮಾಡುತ್ತ ಬಂದಿದ್ದೆವು ಎಂದು ಶ್ರೀನಿವಾಸ್ ತಿಳಿಸಿದರು.

ನಗರ ಸಹಿತ ಅವಿಭಜಿತ ಬಳ್ಳಾರಿ ಜಿಲ್ಲೆಯ ವಿವಿಧ ಜಡೆಗಳಲ್ಲಿ ಸೆ.25ರಂದು ಬೃಹತ್ ಪ್ರತಿಭಟನೆ ನಡೆದಿತ್ತು ಹಾಗು ಸರ್ಕಾರಕ್ಕೆ 10 ದಿನಗಳ ಗಡುವು ನೀಡಲಾಗಿತ್ತು. ಆ ಗಡುವು ಭಾನುವಾರ ಅಂತ್ಯಗೊಂಡ ಮೇರೆಗೆ ಈ ತುರ್ತು ಪ್ರತಿಕಾಗೋಷ್ಠಿ ಕರೆದು ಸಮಾಜದವರು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

ಸಮಾಜದ ಮುಖಂಡರಾದ ಕಿನ್ನಾಳ್‌ ಹನುಮಂತ, ಗುಡಿಗುಡಿ ಸೋಮನಾಥ, ಗುಜ್ಜಲ್ ಚಂದ್ರಶೇಖರ್, ದೇವೇಂದ್ರಪ್ಪ, ತಾರಿಹಳ್ಳಿ ವೆಂಕಟೇಶ್‌, ಹನುಮಂತ, ಶ್ರೀಕಂಠ, ಜೆ.ವಸಂತಕುಮಾರ್ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.