ADVERTISEMENT

ಮೋದಿ, ಬೊಮ್ಮಾಯಿ ಭಾವಚಿತ್ರಕ್ಕೆ ಬೆಂಕಿ

ಬಂಜಾರ ಸಮಾಜದಿಂದ ಮತದಾನ ಬಹಿಷ್ಕಾರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 18:43 IST
Last Updated 31 ಮಾರ್ಚ್ 2023, 18:43 IST
ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಮೀಸಲಾತಿ ಸಂರಕ್ಷಣಾ ಒಕ್ಕೂಟದವರು ಶುಕ್ರವಾರ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು
ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಮೀಸಲಾತಿ ಸಂರಕ್ಷಣಾ ಒಕ್ಕೂಟದವರು ಶುಕ್ರವಾರ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು   

ಹೊಸಪೇಟೆ (ವಿಜಯನಗರ): ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ ಮೀಸಲಾತಿ ಜಾರಿಗೊಳಿಸುವ ಸರ್ಕಾರದ ತೀರ್ಮಾನ ವಿರೋಧಿಸಿ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯದವರು ಶುಕ್ರವಾರ ಜಿಲ್ಲೆಯ ಹೂವಿನಹಡಗಲಿ ಪಟ್ಟಣ ಹಾಗೂ ಹರಪನಹಳ್ಳಿ ತಾಲ್ಲೂಕಿನ ಮಾಚಿಹಳ್ಳಿ ತಾಂಡಾದಲ್ಲಿ ಪ್ರತಿಭಟನೆ ನಡೆಸಿದರು.

ಹಡಗಲಿ ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಲ್ಲಿ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಸಾವಿರಾರು ಜನರು ರಸ್ತೆ ಮಾರ್ಗ ಬಂದ್ ಮಾಡಿ ಪ್ರತಿಭಟಿಸಿದರು. ದೂಪದಹಳ್ಳಿ ಮರಿಯ್ಮಮದೇವಿ ಮಠದ ಶಿವಪ್ರಕಾಶ್ ಮಹಾರಾಜ್ ಮಾತನಾಡಿ, ‘ಒಳ ಮೀಸಲಾತಿ ನೆಪದಲ್ಲಿ ಸರ್ಕಾರ ಪರಿಶಿಷ್ಟರಲ್ಲಿ ಒಡಕು ಸೃಷ್ಟಿಸಿದೆ. ಸರ್ಕಾರ ಈ ತೀರ್ಮಾನ ಹಿಂಪಡೆಯದಿದ್ದರೆ ಎಲ್ಲ ಲಂಬಾಣಿ ತಾಂಡಾಗಳಲ್ಲಿ ಚುನಾವಣೆ ಬಹಿಷ್ಕರಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಮಾಚಿಹಳ್ಳಿ ತಾಂಡಾದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಸಚಿವರಾದ ಗೋವಿಂದ ಕಾರಜೋಳ, ಪ್ರಭು ಚೌಹಾಣ್‌, ಸಂಸದ ಉಮೇಶ ಜಾಧವ್‌ ಅವರ ಭಾವಚಿತ್ರಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.‌

ADVERTISEMENT

ಲಂಬಾಣಿ ಸಮುದಾಯ ಪ್ರತಿಭಟನೆ (ಕಲಬುರಗಿ ವರದಿ): ಒಳಮೀಸಲಾತಿ ಹಂಚಿಕೆ ನಿರ್ಣಯ ಖಂಡಿಸಿ ಬಂಜಾರ, ಭೋವಿ, ಕೊರಚ, ಕೊರಮ ಮುಂತಾದ ಸಮುದಾಯದ ಜನರು ಶುಕ್ರವಾರ ನಗರದಲ್ಲಿ ‍ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಮೀಸ ಲಾತಿ ಸಂರಕ್ಷಣಾ ಸಮಿತಿ, ಗೋರಸೇನಾ ರಾಷ್ಟ್ರೀಯ ಸಂಘಟನೆ ಮತ್ತು ಭೋವಿ ಸಮಾಜದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಏಪ್ರಿಲ್ 4ರಂದು ಬಂಜಾರ ಸಂಘದ ಸಭೆ‌: ಅಖಿಲ ಭಾರತ ಬಂಜಾರ ಸೇವಾಸಂಘದ ಕಾರ್ಯಕಾರಣಿ ಸಮಿತಿ ಸಭೆ ಏ. 4ರಂದು ಕೊಪ್ಪಳದಲ್ಲಿ ಆಯೋಜಿ ಸಲಾಗಿದೆ’ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಭರತ ನಾಯ್ಕ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.