ಹೊಸಪೇಟೆ (ವಿಜಯನಗರ): ಮಹಾಶಿವರಾತ್ರಿ ಪ್ರಯುಕ್ತ ಇಷ್ಟಲಿಂಗ ಅಧ್ಯಯನ ಕೇಂದ್ರದಿಂದ ಮಂಗಳವಾರ ಸಂಜೆ ನಗರದ ರುದ್ರಭೂಮಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಮಾಧಿಗಳ ಬಳಿ ದೀಪ ಬೆಳಗಿಸಿ, ಪ್ರಾರ್ಥನೆ ಮಾಡಿ, ಇಷ್ಟಲಿಂಗ ಪೂಜೆ ಮಾಡಿದರು. ಬಳಿಕ ಅಲ್ಲೇ ಪ್ರಸಾದ ಸ್ವೀಕರಿಸಿದರು. ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ಅಜಯ್ ಕುಮಾರ್ ತಾಂಡೂರ್ ಮಾತನಾಡಿ, ಸಾವು ಮತ್ತು ಸ್ಮಶಾನದ ಬಗ್ಗೆ ಇರುವ ಮೌಢ್ಯವನ್ನು ಹೋಗಲಾಡಿಸಲು ಪ್ರತಿವರ್ಷ ಶಿವರಾತ್ರಿಯ ದಿನ ಸ್ಮಶಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ಹಿರಿಯ ಚೇತನಗಳಿಗೆ ಗೌರವ ಸಮರ್ಪಿಸಲಾಗುತ್ತಿದೆ ಎಂದರು.
ಲಿಂಗಾಯತ ಧರ್ಮದಲ್ಲಿ ಷಟಸ್ಥಲಗಳಲ್ಲಿ ಐಕ್ಯಸ್ಥಲಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಐಕ್ಯ ಸ್ಥಲ ತಲುಪಿದವರು ಬಯಲ ಅನುಭವ ಪಡೆಯುತ್ತಾರೆ. ಅವರು ಸಾವನ್ನಪ್ಪಿದಾಗ ಬಯಲಲ್ಲಿ ಬಯಲಾಗುತ್ತಾರೆ. ಅಂತಹ ಸ್ಥಳವನ್ನು ತಾತ್ಸಾರ ಭಾವದಿಂದ ಕಾಣಬಾರದು. ರುದ್ರಭೂಮಿ ಅಂತಿಮ ಸತ್ಯ. ಈ ಕಾರ್ಯಕ್ರಮದ ಮೂಲಕ ನಾಗರೀಕ ಸಮಾಜಕ್ಕೆ ಅದನ್ನು ತಿಳಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.