ADVERTISEMENT

ದರೋಜಿ ಕರಡಿಧಾಮದಲ್ಲಿ ಬೀಜ ಬಿತ್ತೋತ್ಸವ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 13:31 IST
Last Updated 6 ಜೂನ್ 2022, 13:31 IST
ಹೊಸಪೇಟೆ ತಾಲ್ಲೂಕಿನ ದರೋಜಿ ಕರಡಿಧಾಮದಲ್ಲಿ ಬೀಜ ಬಿತ್ತೋತ್ಸವ ಅಭಿಯಾನ ನಡೆಯಿತು
ಹೊಸಪೇಟೆ ತಾಲ್ಲೂಕಿನ ದರೋಜಿ ಕರಡಿಧಾಮದಲ್ಲಿ ಬೀಜ ಬಿತ್ತೋತ್ಸವ ಅಭಿಯಾನ ನಡೆಯಿತು   

ಹೊಸಪೇಟೆ (ವಿಜಯನಗರ): ‘ಬೀಜ ಬಿತ್ತೋಣ, ಅರಣ್ಯ ಬೆಳೆಸೋಣ’ ಎಂಬ ಘೋಷವಾಕ್ಯದೊಂದಿಗೆ ‘ಬೀಜ ಬಿತ್ತೋತ್ಸವ 2022’ ಅಭಿಯಾನಕ್ಕೆ ತಾಲ್ಲೂಕಿನ ದರೋಜಿ ಕರಡಿಧಾಮದಲ್ಲಿ ಭಾನುವಾರ ಚಾಲನೆ ನೀಡಲಾಯಿತು.

ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿರುವ ಕಾರ್ಯಕ್ರಮವು ಜೂ. 12ರ ವರೆಗೆ ನಡೆಯಲಿದೆ. ಮೊದಲ ದಿನ ಕರಡಿಧಾಮದಲ್ಲಿ ಹುಣಸೆ ನೆಡುತೋಪು ಪ್ರದೇಶದ ಐದು ಹೆಕ್ಟೇರ್‌ನಲ್ಲಿ ಹೊಂಗೆ, ಕಕ್ಕೆ, ಬೇವು, ಸೀಮೆತಂಗಡಿ, ಹುಣಸೆ ಬೀಜಗಳನ್ನು ಬಿತ್ತಲಾಯಿತು.

ದರೋಜಿ ಕರಡಿಧಾಮ ವನ್ಯಜೀವಿ ವಲಯದ ವಲಯ ಅರಣ್ಯ ಅಧಿಕಾರಿ ಎಂ.ಉಷಾ ಮಾತನಾಡಿ, ‘ನಾಳೆಯ ಉತ್ತಮ ಭವಿಷ್ಯಕ್ಕಾಗಿ ನಾಡಿನಲ್ಲಿ ಹಸಿರನ್ನು ಹೆಚ್ಚಿಸೋಣ. ಅದಕ್ಕಾಗಿ ಪ್ರತಿಯೊಬ್ಬರೂ ಸುತ್ತಮುತ್ತಲಿನ ಗಿಡ, ಮರಗಳನ್ನು ಸಂರಕ್ಷಿಸೋಣ. ಜೊತೆಗೆ ಹೆಚ್ಚೆಚ್ಚು ಗಿಡಗಳನ್ನು ಬೆಳೆಸೋಣ’ ಎಂದು ಹೇಳಿದರು.

ADVERTISEMENT

‘ಜೂ.12ರ ವರೆಗೆ ಬೀಜ ಬಿತ್ತೋತ್ಸವ ನಡೆಯಲಿದ್ದು, ಶಾಲೆಗಳು, ಯುವ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು, ಸಾರ್ವಜನಿಕರು ಹತ್ತಿರದ ವಲಯ ಅರಣ್ಯ ಕಚೇರಿಗೆ ಭೇಟಿ ನೀಡಿ, ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.

ದರೋಜಿ ಕರಡಿಧಾಮ ವಲಯ ಉಪ ವಲಯ ಅರಣ್ಯ ಅಧಿಕಾರಿಗಳಾದ ಸಂತೋಷ್ ಕೆ.ನಂದಿಗಟ್ಟಿ, ಎಚ್.ಪಿ.ಜಗದೀಶ, ಅರಣ್ಯ ರಕ್ಷಕ ಸಿಬ್ಬಂದಿ ವಿಶ್ವನಾಥ ಎಸ್.ಹಿರೇಮನಿ, ಮೇಘನಾ ಇದ್ದರು.

ಷಾ ಭವರ್‌ಲಾಲ್ ಬಾಬುಲಾಲ್ ನಾಹರ್ ಕಾಲೇಜು:

‘ಅಭಿವೃದ್ಧಿಯ ಜೊತೆ ಜೊತೆಗೆ ಪರಿಸರದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಬಹಳ ಮುಖ್ಯ’ ಎಂದು ಮುನಿರಾಬಾದ್‌ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಪುತ್ರ ಶಂಭು ತಿಳಿಸಿದರು.

ಪರಿಸರ ದಿನಾಚರಣೆ ನಿಮಿತ್ತ ಸೋಮವಾರ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಪ್ರಾಚಾರ್ಯ ಎನ್‌. ವಿಶ್ವನಾಥಗೌಡ, ಪ್ರಾಧ್ಯಾಪಕರಾದ ಶೋಭಾ, ಜಗದೀಶ, ಮಲ್ಲಿಕಾರ್ಜುನ ಇಟ್ಟಿಗಿ, ಬಿದರಕುಂದಿ ಮಲ್ಲಿಕಾರ್ಜುನ, ಶೋಭಾ ಪಾಟೀಲ ಇದ್ದರು.

ಡಣಾಪುರದಲ್ಲಿ ಪರಿಸರ ದಿನ:

ತಾಲ್ಲೂಕಿನ ಡಣಾಪುರ ಅಂಗನವಾಡಿ ಕೇಂದ್ರ-3ರಲ್ಲಿ ಭಾನುವಾರ ಸಸಿ ನೆಡುವ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ನಾರಾಯಣ ರಾವ್ ಚಾಲನೆ ನೀಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಯಲಿಗಾರ ಇದ್ದರು.

ಟಿಎಂಎಇಎಸ್‌ ವಿಜ್ಞಾನ, ವಾಣಿಜ್ಯ ಕಾಲೇಜು:

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಂ.ಕೆ. ರವೀಂದ್ರ, ನಿರ್ದೇಶಕ ಟಿ.ಎಂ. ಚಂದ್ರಶೇಖರ್‌ ಅವರು ಕಾಲೇಜಿನ ಆವರಣದಲ್ಲಿ ಸಸಿ ನೆಟ್ಟು ಚಾಲನೆ ನೀಡಿದರು.

ಎಂ.ಕೆ. ರವೀಂದ್ರ ಮಾತನಾಡಿ, ಇರುವುದೊಂದೇ ಭೂಮಿ. ಅದನ್ನು ಉಳಿಸಿಕೊಳ್ಳುವ ಅವಶ್ಯಕತೆ ಇದೆ. ಪರಿಸರವನ್ನು ನಾವು ಸಂರಕ್ಷಿಸಿದರೆ ಅದು ಸಮಸ್ತ ಜೀವ ಸಂಕುಲವನ್ನು ಕಾಪಾಡುತ್ತದೆ ಎಂದರು.

ಪ್ರಾಚಾರ್ಯ ಪ್ರೊ. ವಿ.ಎಸ್. ದಯಾನಂದಕುಮಾರ್, ಶಿಕ್ಷಣ ಸಂಯೋಜಕ ಪಿ.ವಿ.ಶೇಷಸಾಯಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಎಸ್. ಆರ್. ನಾಗರಾಜ್, ಪ್ರಾಧ್ಯಾಪಕರಾದ ಚಿತ್ರಕಲಾ, ಸಿಂಧು ಸಿ., ದೀಪಕ್ ನವಲೆ, ಮಂಜುನಾಥ ಕೆ., ರಾಜೇಶ್ ನವಲೆ, ಸಂಗಮೇಶ ಎಸ್. ಗಣಿ, ಪ್ರತಿಭಾ ಹಿರೇಮಠ, ದೈಹಿಕ ಶಿಕ್ಷಣ ಉಪನ್ಯಾಸಕ ಮಲ್ಲಿಕಾರ್ಜುನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.