ವಿಜಯನಗರ (ಹೊಸಪೇಟೆ): ‘ಸಂಗೀತ ಸಪ್ತಸ್ವರಗಳ ಪಿತಾಮಹ ಮಾತಂಗ ಮಹರ್ಷಿ ಜಯಂತಿ ಶನಿವಾರ (ಫೆ. 27) ಹಂಪಿ ಮಾತಂಗ ಪರ್ವತದ ಪುಣ್ಯಸ್ಥಳದಲ್ಲಿ ಸರಳವಾಗಿ ಆಚರಿಸಲಾಗುತ್ತದೆ’ ಎಂದು ಮಾಜಿಸಚಿವ, ಸಮಾಜದ ಮುಖಂಡ ಎಚ್.ಆಂಜನೇಯ ತಿಳಿಸಿದರು.
‘ಹಂಪಿಯ ಮಾತಂಗ ಮಹರ್ಷಿಗಳ ಜಯಂತಿ ಹಾಗೂ ಮಾದಿಗ ಸಮಾಜದ ಕುಲದೇವತೆ ಮಾತಂಗಿ ದೇವಿಯ ದೀಪೋತ್ಸವವನ್ನು ಮಾತಂಗ ಪರ್ವತದಲ್ಲಿ ಆಯೋಜಿಸಲಾಗಿದೆ. ಕೋವಿಡ್ ಕಾರಣದಿಂದ ಸರಳವಾಗಿ, ಸುರಕ್ಷತಾ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಆಚರಿಸಲು ತೀರ್ಮಾನಿಸಲಾಗಿದೆ’ ಎಂದು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಹಂಪಿ ವಿದ್ಯಾರಣ್ಯ ಪೀಠದ ಶಂಕರಾಚಾರ್ಯ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಂಪಿ ಮಾತಂಗ ಮಹರ್ಷಿ ಆಶ್ರಮದ ಪೂರ್ಣಾನಂದ ಭಾರತಿ ಸ್ವಾಮೀಜಿ ನೇತೃತ್ವ ವಹಿಸಿಕೊಳ್ಳುವರು. ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಸೇರಿದಂತೆ ಮಾದಿಗ ಸಮಾಜದ ಮುಖಂಡರು ಪಾಲ್ಗೊಳ್ಳುವರು’ ಎಂದು ತಿಳಿಸಿದರು.
ಸಮಾಜದ ಮುಖಂಡರಾದ ನಿಂಬಗಲ್ ರಾಮಕೃಷ್ಣ, ಎಚ್.ಎಸ್. ವೆಂಕಪ್ಪ, ಭರತ್ ಕುಮಾರ್, ಬಿ. ಸಿ. ಮಹಾಂತೇಶ, ಶೇಖರಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.