
ಹೊಸಪೇಟೆ (ವಿಜಯನಗರ): ‘ವಿಕಲಚೇತನರಿಗೆ ವಿಕಲಾಂಗತೆ ದೌರ್ಬಲ್ಯವಲ್ಲ. ದೈಹಿಕ ನ್ಯೂನತೆಯ ಜತೆಗೆ ಒಂದು ವಿಶೇಷ ಸಾಮಾರ್ಥ್ಯ ಶಕ್ತಿಯನ್ನು ಹೊಂದಿರುತ್ತಾರೆ, ಎಲ್ಲ ಅಂಗಗಳೂ ಸಮರ್ಪಕವಾಗಿರುವವರ ಮಾನಸಿಕ ಅಂಗವೈಕಲ್ಯವೇ ಇಂದಿನ ದೊಡ್ಡ ಸವಾಲು’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ಇಲ್ಲಿನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆದ ವಿಶ್ವ ಅಂಗವಿಕಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ವಿಕಲಾಂಗರು ದೈಹಿಕವಾಗಿ ನ್ಯೂನತೆಗಳನ್ನು ಹೊಂದಿರಬಹುದು, ಆದರೆ ನಾಗರಿಕ ಸಮಾಜದಲ್ಲಿ ಸಾಮಾನ್ಯ ವ್ಯಕ್ತಿಗಳು ಕೊಳಕು ಮನಸ್ಥಿತಿಯಿಂದ ಮಾನಸಿಕ ವಿಕಲಾಂಗತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಅಂತಹ ಹೀನ ವ್ಯಕ್ತಿಗಳೇ ನಿಜವಾದ ವಿಕಲಚೇತನರು ಅನ್ನಿಸಿಕೊಳ್ಳುತ್ತಾರೆ, ನಾವೆಲ್ಲರೂ ಮಾನಸಿಕ ಅಂಗವೈಕಲ್ಯ ಬರದಂತೆ ನೋಡಿಕೊಳ್ಳಬೇಕಿದೆ’ ಎಂದು ಡಿಸಿ ಸಲಹೆ ನೀಡಿದರು.
ಇದೇ ವೇಳೆ ವಿಶ್ವ ವಿಕಲಚೇತನರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರಾಮಾಂಜಿನೇಯ ಇತರರು ಇದ್ದರು.