ADVERTISEMENT

ಗಾಂಧಿ ಜಯಂತಿ ದಿನದಂದು ವಿಜಯನಗರ ಜಿಲ್ಲೆ‌ ಉದ್ಘಾಟನೆ: ಸಚಿವ ಆನಂದ್ ಸಿಂಗ್

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 6:39 IST
Last Updated 17 ಸೆಪ್ಟೆಂಬರ್ 2021, 6:39 IST
ಆನಂದ್ ಸಿಂಗ್
ಆನಂದ್ ಸಿಂಗ್   

ಹೊಸಪೇಟೆ (ವಿಜಯನಗರ): ನೂತನ ವಿಜಯನಗರ ಜಿಲ್ಲೆಯ ಉದ್ಘಾಟನಾ ಸಮಾರಂಭ ಅ.2 ಗಾಂಧಿ ಜಯಂತಿ ದಿನದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಗರದಲ್ಲಿ ಉದ್ಘಾಟಿಸುವರು ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ತಿಳಿಸಿದರು.

ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ನಿಮಿತ್ತ ಶುಕ್ರವಾರ ನಗರದ ಕ್ರೀಡಾಂಗಣದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಅ. 2, 3ರಂದು ಎರಡು ದಿನ ಕಾರ್ಯಕ್ರಮ ಆಚರಿಸಲಾಗುವುದು. ವಿಜಯನಗರ ರಚನೆಗೆ ಕಾರಣರಾದ ಮಾಜಿ ಮುಖ್ಯಮಂತ್ರಿ, ಶಾಸಕ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅನೇಕ ಹಾಲಿ, ಮಾಜಿ ಶಾಸಕ, ಸಚಿವರನ್ನು ಆಹ್ವಾನಿಸಲಾಗುತ್ತದೆ. ಸರಳ-ವಿಜೃಂಭಣೆಯ ನಡುವೆ ಕಾರ್ಯಕ್ರಮ ಜರುಗಲಿದೆ. ಹೆಚ್ಚು ಎಲ್‌ಇಡಿ ಪರದೆ ಅಳವಡಿಸಿ ಜನ ಸೇರದಂತೆ ನೋಡಲಾಗುವುದು ಎಂದರು.

ಅ. 2ರ ನಂತರ ಜಿಲ್ಲೆ ಕಟ್ಟುವ ಪ್ರಕ್ರಿಯೆ ಚುರುಕುಗೊಳ್ಳಲಿದೆ. ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಪ್ರಮುಖ ಕಚೇರಿಗಳನ್ನು ಆರಂಭಿಸಲಾಗುವುದು. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ವೇಗ ಕೊಡಲಾಗುವುದು ಎಂದು ವಿವರಿಸಿದರು.

ಹೊಸ ಜಿಲ್ಲೆ ಕಟ್ಟುವುದು ಸವಾಲಿನ ಕೆಲಸ. ಆದರೆ, ಇತರೆ ಜಿಲ್ಲೆಗಳ ಅಭಿವೃದ್ಧಿ, ಕಟ್ಟಿದ ಅನುಭವ ನೋಡಿಕೊಂಡು ವಿಜಯನಗರ ಕಟ್ಟಲಾಗುವುದು. ಆದರೆ, ಕೆಲವು ಜಿಲ್ಲೆಗಳ ಅಭಿವೃದ್ಧಿ ಗೆ ಸಾಕಷ್ಟು ವಿಳಂಬವಾಗಿದೆ. ಆ ರೀತಿ ವಿಜಯನಗರ ಆಗುವುದಿಲ್ಲ. ಬೇಗ ಎಲ್ಲಾ ಕಾಮಗಾರಿಗಳನ್ನು ಆರಂಭಿಸಲಾಗುವುದು. ಅನುದಾನ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು‌ ಎಂದರು.

ಇದನ್ನೂ ಓದಿ... 71ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ: ರಾಷ್ಟ್ರಪತಿ ಸೇರಿ ಗಣ್ಯರಿಂದ ಶುಭಾಶಯ

ವಿಜಯನಗರ ಜಿಲ್ಲೆ ರಚನೆಯಾದ ನಂತರ 371 ಜೆ ಸೌಲಭ್ಯ ಹೋಗುತ್ತವೆ ಎಂಬ ಸುದ್ದಿಗಳು ಹರಿದಾಡಿತ್ತು. ಈ ದಿನ ಕಲ್ಯಾಣ ಕರ್ನಾಟಕ ದಿನ ಆಚರಿಸಲಾಗಿದೆ. ಎಲ್ಲರಿಗೂ ಈ ಹಿಂದಿನಂತೆಯೇ ಎಲ್ಲಾ ಸವಲತ್ತುಗಳು ಸಿಗಲಿವೆ. ಕೋವಿಡ್ ಇರುವುದರಿಂದ ಹೆಚ್ಚಿಗೆ ಜನ ಸೇರಿಸದೆ ವಿಮೋಚನಾ ದಿನ ಸರಳವಾಗಿ ಆಚರಿಸಲಾಗಿದೆ ಎಂದು ಹೇಳಿದರು.

ವಿಜಯನಗರ ಜಿಲ್ಲೆ ವಿಶೇಷ ಅಧಿಕಾರಿ ಅನಿರುದ್ಧ್ ಪಿ. ಶ್ರವಣ್, ಹೆಚ್ಚುವರಿ ಎಸ್ಪಿ ಬಿ.ಎನ್. ಲಾವಣ್ಯ, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್ ವಿಶ್ವನಾಥ್, ನಗರಸಭೆ ಪೌರಾಯುಕ್ತ ಮನ್ಸೂರ ಅಲಿ, ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.