ADVERTISEMENT

ವಿಜಯನಗರ: ಸಚಿವ ಆನಂದ್ ಸಿಂಗ್‌ಗೆ ಪಿತೃ ವಿಯೋಗ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 9:33 IST
Last Updated 18 ಜುಲೈ 2021, 9:33 IST
ಪೃಥ್ವಿರಾಜ್ ಸಿಂಗ್
ಪೃಥ್ವಿರಾಜ್ ಸಿಂಗ್   

ಹೊಸಪೇಟೆ (ವಿಜಯನಗರ): ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ಅವರ ತಂದೆ ಪೃಥ್ವಿರಾಜ್ ಸಿಂಗ್ (84) ಭಾನುವಾರ ಇಲ್ಲಿನ ರಾಣಿಪೇಟೆಯ ಅವರ ನಿವಾಸದಲ್ಲಿ ನಿಧನ ಹೊಂದಿದರು.

ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗಷ್ಟೇ ಮನೆಗೆ ಮರಳಿದ್ದರು. ಭಾನುವಾರ ಪುನಃ ಅವರ ಆರೋಗ್ಯದಲ್ಲಿ ಏರುಪೇರಾಗಿ ಮಧ್ಯಾಹ್ನ 12ಕ್ಕೆ ನಿಧನರಾದರು. ಸಂಜೆ ನಾಲ್ಕು ಗಂಟೆಗೆ ರಾಣಿಪೇಟೆಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂದವರು ಪ್ರಜಾವಾಣಿಗೆ ತಿಳಿಸಿದ್ದಾರೆ.

ಮೂಲತಃ ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲ್ಲೂಕಿನ ಶಂಕರ್ ಸಿಂಗ್ ಕ್ಯಾಂಪಿನ ನಿವಾಸಿಯಾದ ಪೃಥ್ವಿರಾಜ್ ಸಿಂಗ್ ಅವರು ಸಾರಿಗೆ ಉದ್ಯಮ ನಡೆಸುತ್ತಿದ್ದರು. ಮೃತರ ಮೊದಲ ಪತ್ನಿ ಅನೇಕ ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. ಅವರಿಗೆ ಇಬ್ಬರು ಗಂಡು, ಒಬ್ಬ ಹೆಣ್ಣು ಮಗಳಿದ್ದಾರೆ. ಎರಡನೇ ಪತ್ನಿ ಹಾಗೂ ಅವರ ಮಗ ಆನಂದ್ ಸಿಂಗ್ ಇದ್ದಾರೆ.

ತಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಅವರು ಎಲ್ಲ ಕೆಲಸ ಬದಿಗೊತ್ತಿ, ಅನೇಕ ದಿನಗಳಿಂದ ಕ್ಷೇತ್ರದಿಂದ ದೂರ ಉಳಿದು ಅವರೊಂದಿಗೆ ಆಸ್ಪತ್ರೆಯಲ್ಲಿಯೇ ಇದ್ದರು.

ಪೃಥ್ವಿರಾಜ್ ಸಿಂಗ್ ಅವರು ಅವರ ಎರಡು ಕಣ್ಣುಗಳನ್ನು ಆಸ್ಪತ್ರೆಗೆ ದಾನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT