ADVERTISEMENT

ವಿಜಯನಗರ | ಸಾಗುವಳಿ ಭೂಮಿಯಲ್ಲಿ ನರೇಗಾ ಕೆಲಸ: ಮಹಿಳೆ ಆತ್ಮಹತ್ಯೆ 

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 12:29 IST
Last Updated 6 ಏಪ್ರಿಲ್ 2024, 12:29 IST
<div class="paragraphs"><p>ಮೈಲಮ್ಮ ದಿದ್ಗಿ</p></div>

ಮೈಲಮ್ಮ ದಿದ್ಗಿ

   

ಹಗರಿಬೊಮ್ಮನಹಳ್ಳಿ(ವಿಜಯನಗರ): ತಾಲ್ಲೂಕಿನ ಮೋರಿಗೇರಿ ಗ್ರಾಮದ ಸಾಗುವಳಿ ಜಮೀನಿನಲ್ಲಿ ಗೋಕಟ್ಟೆ ನಿರ್ಮಿಸಲು ನರೇಗಾ ಕಾಮಗಾರಿ ಆರಂಭಿಸಿದ್ದನ್ನು ವಿರೋಧಿಸಿ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೈಲಮ್ಮ ದಿದ್ಗಿ ಮೃತ ಮಹಿಳೆ. ಈ ಕುರಿತು ಮೃತ ಮಹಿಳೆ ಪುತ್ರ ದುರುಗಪ್ಪ ಅವರು ಮೋರಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಪಿಡಿಒ ಸೇರಿದಂತೆ 8 ಜನರ ವಿರುದ್ಧ ಏ.5ರಂದು ಇಟ್ಟಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಘಟನೆ ವಿವರ: ಮೈಲಮ್ಮ ಅವರು ಮೋರಿಗೇರಿ ಗ್ರಾಮದ ಸರ್ವೇ ನಂ: 654/(ಎ)ರ 5ಎಕರೆ ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದು, ಸಾಗುವಳಿ ಚೀಟಿಗಾಗಿ ಅರ್ಜಿಯನ್ನೂ ಸಲ್ಲಿಸಿದ್ದರು ಎನ್ನಲಾಗಿದೆ.  ಏ.4ರಂದು ಈ ಜಮೀನಿನಲ್ಲಿ ಗೋಕಟ್ಟೆ ಕಟ್ಟಲು ಅಧಿಕಾರಿಗಳು ನರೇಗಾ ಕಾಮಗಾರಿ ಆರಂಭಿಸಿದ್ದರು. 

‘ನಮ್ಮ ತಾಯಿ ಮೈಲಮ್ಮ ಕಾಮಗಾರಿಗೆ ವಿರೋದಿಸಿದ್ದರು. ಗ್ರಾಮ ಪಂಚಾಯಿತಿ ಪಿಡಿಒ ಖಾಜಾಬಾನು, ಅಧ್ಯಕ್ಷ ಉದಯ್ ಚಿಲಗೋಡು ಮತ್ತು ಗ್ರಾಮ ಪಂಚಾಯಿತಿ, ನರೇಗಾ ಯೋಜನೆಯ ಸಿಬ್ಬಂದಿ ಬಸವರಾಜ, ಪ್ರಕಾಶ, ಶೈಲಜಾ, ಕೊಟ್ರೇಶ್, ಶಿವಕುಮಾರ, ರಾಘವೇಂದ್ರ ನನ್ನ ತಾಯಿಯನ್ನು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದಾರೆ. ವಿಷ ಕುಡಿದು ಸಾಯುವಂತೆ ಪ್ರಚೋದನೆ ನೀಡಿದ್ದಾರೆ. ಇದರಿಂದ ಮನನೊಂದ ತಾಯಿ ಮೈಲಮ್ಮ ವಿಷ ಕುಡಿದಿದ್ದಾರೆ. ಅವರನ್ನು ಕೊಪ್ಪಳದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಏ.5ರಂದು ಮೃತಪಟ್ಟಿದ್ದಾರೆ. ನನ್ನ ತಾಯಿ ಸಾವಿಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು‘ ಎಂದು ದುರುಗಪ್ಪ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.