ಹೊಸಪೇಟೆ (ವಿಜಯನಗರ): ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಅವಳಿ ಜಿಲ್ಲೆಗಳಾದ ವಿಜಯನಗರ–ಬಳ್ಳಾರಿಯಲ್ಲಿ ಒಟ್ಟು 19 ಮನೆಗಳಿಗೆ ಹಾನಿಯಾಗಿದೆ.
ವಿಜಯನಗರ ಜಿಲ್ಲೆಯಲ್ಲಿ 10 ಮನೆಗಳು ಬಿದ್ದಿವೆ. ಕೂಡ್ಲಿಗಿ ತಾಲ್ಲೂಕಿನಲ್ಲಿ 4, ಹೊಸಪೇಟೆ ಹಾಗೂ ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ತಲಾ ಮೂರು ಮನೆಗಳ ಗೋಡೆ ಬಿದ್ದಿದೆ. ಬಳ್ಳಾರಿ ಜಿಲ್ಲೆಯಲ್ಲಿ 9 ಮನೆಗಳಿಗೆ ಹಾನಿ ಉಂಟಾಗಿದೆ. ಸಂಡೂರಿನಲ್ಲಿ 5, ಕಂಪ್ಲಿಯಲ್ಲಿ 4 ಮನೆಗಳ ಗೋಡೆ ಭಾಗಶಃ ಕುಸಿದು ಬಿದ್ದಿದೆ.
ಬುಧವಾರ ಸಂಜೆ ಕೆಲಕಾಲ ಮಳೆಯಾಗಿತ್ತು. ಅನಂತರ ರಾತ್ರಿ 10ಗಂಟೆಗೆ ಶುರುವಾದ ಮಳೆ ತಡರಾತ್ರಿ ವರೆಗೆ ಎಡೆಬಿಡದೇ ಸುರಿಯಿತು. ಭಾರಿ ಮಳೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರದಿಂದ ಎರಡು ದಿನ ನಡೆಯಬೇಕಿದ್ದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆ ಕ್ರೀಡಾಕೂಟ ರದ್ದುಪಡಿಸಲಾಯಿತು. ಕ್ರೀಡಾಕೂಟಕ್ಕೆ ಬುಧವಾರ ಸಂಜೆ ಮಾರ್ಕಿಂಗ್ ಮಾಡಿ, ವೇದಿಕೆ ನಿರ್ಮಿಸಿ ಎಲ್ಲ ರೀತಿಯ ಸಿದ್ಧತೆ ಮಾಡಲಾಗಿತ್ತು. ಆದರೆ, ಮಳೆಯಿಂದ ಕ್ರೀಡಾಂಗಣ ಕೊಚ್ಚೆಯಾಗಿದ್ದರಿಂದ ಗುರುವಾರ ಕ್ರೀಡಾಕೂಟ ರದ್ದುಪಡಿಸುವ ತೀರ್ಮಾನಕ್ಕೆ ಬರಲಾಯಿತು. ವಿವಿಧ ತಾಲ್ಲೂಕುಗಳಿಂದ ನಗರಕ್ಕೆ ಬಂದಿದ್ದ ವಿದ್ಯಾರ್ಥಿಗಳು ಕ್ರೀಡಾಕೂಟ ರದ್ದುಗೊಂಡ ವಿಷಯ ತಿಳಿದು ನಿರಾಸೆಯಿಂದ ಹಿಂತಿರುಗಿದರು.
ಗುರುವಾರವೂ ದಿನವಿಡೀ ಕಾರ್ಮೋಡ ಕವಿದಿತ್ತು. ರಾತ್ರಿ 8.30ರಿಂದ ಒಂದೂ ಗಂಟೆಗೂ ಹೆಚ್ಚು ಕಾಲ ಬಿರುಸಿನ ಮಳೆಯಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.