ADVERTISEMENT

ವಿಜಯನಗರ | ನಾಗರಿಕರ ಮೇಲೆ ಬೇಹುಗಾರಿಕೆ; ಪ್ರಧಾನಿ ರಾಜೀನಾಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2022, 10:51 IST
Last Updated 3 ಫೆಬ್ರುವರಿ 2022, 10:51 IST
ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆಗೆ ಆಗ್ರಹಿಸಿ ಎಸ್‌ಡಿಪಿಐ ಕಾರ್ಯಕರ್ತರು ಹೊಸಪೇಟೆ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆಗೆ ಆಗ್ರಹಿಸಿ ಎಸ್‌ಡಿಪಿಐ ಕಾರ್ಯಕರ್ತರು ಹೊಸಪೇಟೆ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಹೊಸಪೇಟೆ (ವಿಜಯನಗರ): ದೇಶದ ನಾಗರಿಕರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂದು ‘ನ್ಯೂಯಾರ್ಕ್‌ ಟೈಮ್ಸ್‌’ ವರದಿ ಮಾಡಿದ್ದು, ಅದರ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕೆಂದು ಸೋಷಿಯಲ್‌ ಡೆಮೊಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಆಗ್ರಹಿಸಿದೆ.

ಈ ಸಂಬಂಧ ನಗರದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ, ಹಕ್ಕೊತ್ತಾಯ ಮಾಡಿದರು. ಕೇಂದ್ರ ಸರ್ಕಾರವು ಇಸ್ರೇಲ್‌ನೊಂದಿಗೆ ಎರಡು ಬಿಲಿಯನ್‌ ಡಾಲರ್‌ ಶಸ್ತ್ರಾಸ್ತ್ರ ಖರೀದಿ ಭಾಗವಾಗಿ ಪೆಗಾಸಸ್‌ ಸ್ಪೈವೇರ್‌ ಮೂಲಕ ದೇಶದ ಜನರ ಮೇಲೆ ಬೇಹುಗಾರಿಕೆ ನಡೆಸಿದೆ. ಇಷ್ಟೇ ಅಲ್ಲ, ರಾಜಕಾರಣಿಗಳು, ಪತ್ರಕರ್ತರು, ಬುದ್ಧಿಜೀವಿಗಳು, ಹೋರಾಟಗಾರರ ಖಾಸಗಿತನವನ್ನು ಜಾಲಾಡುತ್ತಿರುವುದು ಖಂಡನಾರ್ಹ ಎಂದು ಟೀಕಿಸಿದ್ದಾರೆ.

ಈ ಕುರಿತು ವಿರೋಧ ಪಕ್ಷಗಳು ಒತ್ತಾಯಿಸಿದರೂ ಸರ್ಕಾರ ಸಂಸತ್ತಿನ ಅಧಿವೇಶನದಲ್ಲಿ ಚರ್ಚಿಸಲು ಮುಂದಾಗುತ್ತಿಲ್ಲ. ಆದರೆ, ಸುಪ್ರೀಂಕೋರ್ಟ್‌ ಈ ವಿಷಯವನ್ನು ಕೈಗೆತ್ತಿಕೊಂಡು ತನಿಖೆ ನಡೆಸಲು ತಂಡ ರಚಿಸಿದೆ. ಸರ್ಕಾರ ಎಲ್ಲ ಸಂದರ್ಭಗಳಲ್ಲಿ ಆಂತರಿಕ ಭದ್ರತೆಯ ನೆಪವೊಡ್ಡಿ ನುಣುಚಿಕೊಳ್ಳುವಂತಿಲ್ಲ. ನಾಗರಿಕರ ಖಾಸಗಿ ಮಾಹಿತಿ ಅವರ ಮೂಲಭೂತ ಹಕ್ಕಾಗಿದೆ. ಅವರ ಅನುಮತಿಯಿಲ್ಲದೆ ಪಡೆಯುವ ಹಕ್ಕು ಯಾರಿಗೂ ಇಲ್ಲ. ಆದರೆ, ಕೇಂದ್ರ ಸರ್ಕಾರ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದೆ. ಇದರ ಜವಾಬ್ದಾರಿ ಹೊತ್ತು ಪ್ರಧಾನಿ ಅವರ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.