ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಗಾದಿಗನೂರಿನಲ್ಲಿ ಹೊಸಪೇಟೆ–ಬಳ್ಳಾರಿ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ಪೆಟ್ರೋಲ್ ಟ್ಯಾಂಕರ್ಗೆ ಗಣಿಗಾರಿಕೆಗೆ ಸಂಬಂಧಿಸಿದ ಲಾರಿಯೊಂದು ಡಿಕ್ಕಿ ಹೊಡೆದುದರಿಂದ ಟ್ಯಾಂಕರ್ ಉರುಳಿ ಬಿದ್ದಿದ್ದು, ಪೆಟ್ರೋಲ್ ಸೋರಿಕೆಯಾಗಿದೆ. ಜನ ಟ್ಯಾಂಕರ್ ಹತ್ತಿರ ಹೋಗದಂತೆ ಪೊಲೀಸರು ಕಟ್ಟುನಿಟ್ಟಿನ ಬಂದೋಬಸ್ತ್ ಮಾಡಿದ್ದು, ಅನಾಹುತ ತಪ್ಪಿದೆ.
ಟ್ಯಾಂಕರ್ ಹೊಸಪೇಟೆ ಕಡೆಯಿಂದ ಬಳ್ಳಾರಿಯತ್ತ ಹೋಗುತ್ತಿತ್ತು. ಹಿಂದಿನಿಂದ ವೇಗವಾಗಿ ಬಂದ ಲಾರಿ ಟ್ಯಾಂಕರ್ಗೆ ಡಿಕ್ಕಿ ಹೊಡೆದ ಕಾರಣ ಟ್ಯಾಂಕರ್ ಉರುಳಿಬಿತ್ತು. ಎರಡೂ ವಾಹನಗಳಲ್ಲಿ ಇದ್ದವರಿಗೆ ಯಾವುದೇ ಹಾನಿ ಆಗಿಲ್ಲ, ಆದರೆ ಪೆಟ್ರೋಲ್ ಸೋರಿಕೆ ಆದ ಕಾರಣ ಸ್ಥಳದಲ್ಲಿ ಆತಂಕದ ವಾತಾವರಣ ನೆಲೆಸಿತ್ತು ಎಂದು ಪೊಲೀಸರು ತಿಳಿಸಿದರು.
ಪೆಟ್ರೋಲ್ ತುಂಬಿಸಿ ಸಾಗಿಸಲು ಜನ ಮುಂದಾಗಿದ್ದರು. ಆದರೆ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇದ್ದ ಕಾರಣ ಸಮೀಪಕ್ಕೆ ತೆರಳದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡರು. ಅಪಘಾತದ ಬಳಿಕ ಸುಮಾರು ಒಂದು ಗಂಟೆ ಹೆದ್ದಾರಿಯಲ್ಲಿ ವಾಹನ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ಕಿಲೋಮೀಟರ್ಗಟ್ಟಲೆ ವಾಹನಗಳ ಸರದಿ ಸಾಲು ಕಂಡುಬಂತು. ಪೆಟ್ರೋಲ್ ಸೋರಿಕೆ ಬಹುತೇಕ ಅಂತ್ಯವಾಗುತ್ತಿದ್ದಂತೆಯೇ ಒಂದು ಬದಿಯಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಡಿವೈಎಸ್ಪಿ ಟಿ.ಮಂಜುನಾಥ್ ಸ್ಥಳದಲ್ಲಿದ್ದು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು. ಜಿಂದಾಲ್ ಕಂಪನಿಯಿಂದ ಕ್ರೇನ್ ತರಿಸಿ ಟ್ಯಾಂಕರ್ ಮೇಲಕ್ಕೆತ್ತಿ ಬದಿಗೆ ಸರಿಸುವ ಕೆಲಸ ಸಂಜೆ ಆರಂಭವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.