ADVERTISEMENT

ಹೊಸಪೇಟೆ; ಏತ ನೀರಾವರಿ ಪೈಪ್‌ ಒಡೆದು ಅಪಾರ ಬೆಳೆ ನಷ್ಟ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 6:21 IST
Last Updated 18 ನವೆಂಬರ್ 2025, 6:21 IST
ಹೊಸಪೇಟೆ ತಾಲ್ಲೂಕಿನ ಕಮಲಾಪುರ ಸಮೀಪ ಸೋಮವಾರ ಪಿ.ಕೆ.ಹಳ್ಳಿ ಏತ ನೀರಾವರಿ ಪೈಪ್‌ ಒಡೆದು ಭತ್ತದ ಗದ್ದೆಯಲ್ಲಿ ಕೃತಕ ನೆರೆ ಉಂಟಾಗಿದೆ
ಹೊಸಪೇಟೆ ತಾಲ್ಲೂಕಿನ ಕಮಲಾಪುರ ಸಮೀಪ ಸೋಮವಾರ ಪಿ.ಕೆ.ಹಳ್ಳಿ ಏತ ನೀರಾವರಿ ಪೈಪ್‌ ಒಡೆದು ಭತ್ತದ ಗದ್ದೆಯಲ್ಲಿ ಕೃತಕ ನೆರೆ ಉಂಟಾಗಿದೆ   

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಕಮಲಾಪುರ ಸಮೀಪ ಸೀತಾರಾಮ ತಾಂಡಾಕ್ಕೆ ಹೋಗುವ ದಾರಿಯಲ್ಲಿ ಗೌರಿ ಗುಂಡಮ್ಮನ ಸಮೀಪ ಸೋಮವಾರ ಪಿ.ಕೆ.ಹಳ್ಳಿ ಏತ ನೀರಾವರಿ ಪೈಪ್‌ ಒಡೆದು ಅಪಾರ ಪ್ರಮಾಣದಲ್ಲಿ ಕಟಾವಿಗೆ ಬಂದಿದ್ದ ಭತ್ತದ ಬೆಳೆ ನಾಶವಾಗಿದೆ.

‘ಮಧ್ಯಾಹ್ನ 12 ಗಂಟೆ ಸುಮಾರಿಗೆ ಪೈಪ್‌ ಒಡೆದು ನೀರು ರಭಸವಾಗಿ ಗದ್ದೆಯಲ್ಲಿ ತುಂಬತೊಡಗಿತು. ಸಂಜೆ 4ರವರೆಗೂ ನೀರು ರಭಸವಾಗಿ ಹರಿಯುತ್ತಲೇ ಇತ್ತು. ಬಳಿಕ ಪಂಪ್‌ ಬಂದ್ ಮಾಡಲಾಗಿದೆ ಎಂದು ಹೇಳಿದರೂ ಮತ್ತೂ ನೀರು ಬರುತ್ತಲೇ ಇದೆ. ಇದರಿಂದ ಹಲವಾರು ಗದ್ದೆಗಳಲ್ಲಿ ನೀರು ತುಂಬಿಕೊಂಡಿದೆ. ಇನ್ನು ಎರಡು ದಿನದಲ್ಲಿ ಭತ್ತ ಕಟಾವು ಮಾಡಲು ಸಿದ್ಧತೆ ಮಾಡಿಕೊಂಡಿದ್ದೆವು, ನೀರು ತುಂಬಿದ್ದರಿಂದ ಭತ್ತ ಕಟಾವು ಸಾಧ್ಯವೇ ಇಲ್ಲದ ಸ್ಥಿತಿ ಇದೆ. ಇಷ್ಟೆಲ್ಲ ಆಗಿದ್ದರೂ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ’ ಎಂದು ಸ್ಥಳೀಯ ರೈತ ಗುರು ‘ಪ್ರಜಾವಾಣಿ’ಗೆ ತಿಳಿಸಿದರು.

ಆರ್.ಬಾಲರಾಜ್‌, ಅಗಸೂರು ಹನುಮಂತ, ವೆಂಕಟೇಶ್ ಮೊದಲಾದ ರೈತರಿಗೆ ಸೇರಿದ ಹತ್ತಾರು ಎಕರೆ ಜಮೀನಿನಲ್ಲಿ ಇದೀಗ ನೀರು ತುಂಬಿಕೊಂಡಿದೆ. ಕಟಾವು ಹಂತಕ್ಕೆ ಬಂದಿದ್ದ ಭತ್ತವನ್ನು ಯಂತ್ರದ ಮೂಲಕ ಕಟಾವು ಮಾಡಲು ಇದೀಗ ಅಸಾಧ್ಯವಾಗಿದ್ದು, ರೈತರು ಕಂಗಾಲಾಗಿದ್ದಾರೆ ಹಾಗೂ ತಮಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ADVERTISEMENT

ಏತ ನೀರಾವರಿ ಯೋಜನೆಯಲ್ಲಿ ಹಲವು ಲೋಪಗಳು ಆಗಾಗ ಕಾಣಿಸುತ್ತಲೇ ಇದ್ದು, ಈ ಹಿಂದೆ ಸಹ ಹಲವು ಬಾರಿ ಹಲವೆಡೆ ಪೈಪ್‌ಲೈನ್ ಒಡೆದು ಹಾನಿ ಉಂಟಾಗಿತ್ತು. ಇದೀಗ ಮತ್ತೆ ಅದೇ ಪ್ರಸಂಗ ಎದುರಾಗಿದೆ ಎಂದು ರೈತರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.