ಹೊಸಪೇಟೆ (ವಿಜಯನಗರ): ದಾಸ ಶ್ರೇಷ್ಠ ಪುರಂದರದಾಸರ ಆರಾಧನೆ ಅಂಗವಾಗಿ ಮಂತ್ರಾಲಯ ಶ್ರೀಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ನಿಂದ ತಾಲ್ಲೂಕಿನ ಹಂಪಿ ಪುರಂದರ ಮಂಟಪದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ದಾಸ ಸಾಹಿತ್ಯ ಕಾರ್ಯಕ್ರಮ ಬುಧವಾರ ಕೊನೆಗೊಂಡಿತು.
ಪುರಂದರ ದಾಸರ ಮೂರ್ತಿಗೆ ಫಲಪಂಚಾಮೃತಾಭಿಷೇಕ, ವಸ್ತ್ರ ಅಲಂಕಾರ, ಹೂಗಳ ಅಲಂಕಾರ, ಅರ್ಚನೆ, ಶ್ರೀರಾಯರ ಅಷ್ಟೋತ್ತರ ಪಾರಾಯಣ, ನೇವೈದ್ಯ, ಮಹಾಮಂಗಳಾರತಿ, ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು. ಸಂಜೆ ಸ್ವಸ್ತಿವಾಚನ, ಶ್ರೇಯಪ್ರಾರ್ಥನೆ, ಭಜನೆ ಕಾರ್ಯಕ್ರಮ ನಡೆಯಿತು.
ಪುರಂದರದಾಸರ ಭಾವಚಿತ್ರದೊಂದಿಗೆ ವಿಜಯ ವಿಠಲ ದೇವಸ್ಥಾನದ ಸಮೀಪದಿಂದ ಶ್ರೀಪುರಂದರ ದಾಸರ ಮಂಟಪದವರೆಗೆ ಭಜನಾ ಮಂಡಳಿ ಸದಸ್ಯರು ಸಂಕೀರ್ತನೆ ನಡೆಸಿದರು. ದಾಸವಾಣಿ, ಗೀತಗಾಯನ, ಸಾಮೂಹಿಕ ಭಜನೆ, ಶ್ರೀಪುರಂದರ ದಾಸರ ಸಾಹಿತ್ಯ ಕುರಿತು ಉಪನ್ಯಾಸ ನಡೆಯಿತು.
ಪೂರ್ವರಾಧನೆ ದಿನ ಶ್ರೀಮಾಧವತೀರ್ಥ ಮಠದ ಪೀಠಾಧಿಪತಿ ಶ್ರೀವಿದ್ಯಾವಲ್ಲಭ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ಬಳ್ಳಾರಿಯ ಹರಿದಾಸ ವಿದ್ಯಾಪ್ರಸರಣಾಲಯ ಮುಖ್ಯಸ್ಥ ಮಾನಕರಿ ಶ್ರೀನಿವಾಸಾಚಾರ್ಯ, ಮುತ್ತಿಗಿ ಶ್ರೀನಿವಾಸಾಚಾರ್ಯ, ಮಂತ್ರಾಲಯ ಮಠದ ಪಂಡಿತ್ ಪದ್ಮನಾಭಾಚಾರ್ಯ ಅವರು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಟ್ಟರು.
ಆನೆಗೊಂದಿ ರಾಜವಂಶಸ್ಥ ಶ್ರೀಕೃಷ್ಣದೇವರಾಯ, ಪವಾನಾಚಾರ್ಯ, ತಿರುಮಲೇಶ್, ಸಿಂಧನೂರು ದೇಸಾಯಿ, ಗುನ್ನಾಳ್ ವೆಂಕಟೇಶ್, ಮಂತ್ರಾಲಯ ಶ್ರೀಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲಾ ಸಂಯೋಜಕ ಅನಂತ ಪದ್ಮನಾಭ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.