ADVERTISEMENT

ಹೊಸಪೇಟೆ: ಮತ್ತೆ ಹೆಚ್ಚಿದ ಅಣೆಕಟ್ಟೆ ಒಳಹರಿವು

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 12:17 IST
Last Updated 18 ಜುಲೈ 2021, 12:17 IST
ಹರಪನಹಳ್ಳಿ ತಾಲ್ಲೂಕಿನ ಬೇವಿನಹಳ್ಳಿಯಲ್ಲಿ ಗದ್ದೆಯಲ್ಲಿ ಮಳೆ ನೀರು ಸಂಗ್ರಹಗೊಂಡು ಬೆಳೆ ಹಾನಿಯಾಗಿದೆ
ಹರಪನಹಳ್ಳಿ ತಾಲ್ಲೂಕಿನ ಬೇವಿನಹಳ್ಳಿಯಲ್ಲಿ ಗದ್ದೆಯಲ್ಲಿ ಮಳೆ ನೀರು ಸಂಗ್ರಹಗೊಂಡು ಬೆಳೆ ಹಾನಿಯಾಗಿದೆ   

ಹೊಸಪೇಟೆ (ವಿಜಯನಗರ): ಎರಡು ದಿನಗಳಿಂತ ಸತತ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ ಮಲೆನಾಡ ವಾತಾವರಣ ಸೃಷ್ಟಿಯಾಗಿದೆ.

ಕಾರ್ಮೋಡ ಕವಿದು, ಬಿಟ್ಟು ಬಿಟ್ಟು ಜಿಟಿಜಿಟಿ ಮಳೆ ಸುರಿಯುತ್ತಿರುವುದರಿಂದ ವಾತಾವರಣ ಸಂಪೂರ್ಣ ತಂಪಾಗಿದೆ. ಸುತ್ತಮುತ್ತಲಿನ ಪರಿಸರ ಹಚ್ಚ ಹಸಿರಾಗಿದೆ.

ಶನಿವಾರ ಹಗಲು–ರಾತ್ರಿ ಎಡೆಬಿಡದೆ ಮಳೆಯಾಗಿತ್ತು. ಭಾನುವಾರವೂ ಮುಂದುವರೆಯಿತು. ಕೆಲವೊಮ್ಮೆ ಬಿರುಸು, ಕೆಲವೊಮ್ಮೆ ತುಂತುರು, ಜಿಟಿಜಿಟಿ ಮಳೆಯಾಯಿತು. ಮೇಲಿಂದ ತಂಗಾಳಿ ಕೂಡ ಬೀಸುತ್ತಿತ್ತು. ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೊಟ್ಟೂರಿನಲ್ಲಿ ಸಾಧಾರಣ ಮಳೆಯಾದರೆ, ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗ ಸುತ್ತಮುತ್ತ ಬಿರುಸಿನ ಮಳೆಯಾಗಿ ಒಂಬತ್ತು ಮೇಕೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಮನೆಗಳಿಗೆ ನೀರು ನುಗ್ಗಿದೆ. ಗದ್ದೆಗೆ ನೀರು ನುಗ್ಗಿದೆ. ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೆರೆ, ಕಟ್ಟೆ, ಚೆಕ್‌ ಡ್ಯಾಂಗಳು ಸಂಪೂರ್ಣ ಭರ್ತಿಯಾಗಿವೆ.

ADVERTISEMENT

ಒಳಹರಿವು ಮತ್ತಷ್ಟು ಹೆಚ್ಚಳ:ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಸತತ ಹೆಚ್ಚುತ್ತಲೇ ಇದೆ. ಭಾನುವಾರ 57,127 ಕ್ಯುಸೆಕ್‌ ಒಳಹರಿವು ದಾಖಲಾಗಿದೆ. ಶನಿವಾರ 46,054 ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು. 1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 1,615.42 ಅಡಿ ನೀರಿನ ಸಂಗ್ರಹವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.