ಶಿವರಾಜ್ ತಂಗಡಗಿ ಬೆಂಗಾವಲು ವಾಹನ ಡಿಕ್ಕಿ: ಹೆದ್ದಾರಿ ಗಸ್ತು ವಾಹನದ ಎಎಸ್ಐಗೆ ಗಾಯ
ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಸಕಲಾಪುರದ ಹಟ್ಟಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಮಂಗಳವಾರ ಸಂಜೆ ಸಚಿವ ಶಿವರಾಜ್ ತಂಗಡಗಿ ಅವರ ಹೆಚ್ಚುವರಿ ವಾಹನ (ಬೆಂಗಾವಲು) ಡಿಕ್ಕಿಯಾಗಿ ಹೆದ್ದಾರಿ ಗಸ್ತು ವಾಹನದಲ್ಲಿದ್ದ ಎಎಸ್ಐ ಗಾಯಗೊಂಡ ಘಟನೆ ನಡೆದಿದೆ.
ಸಚಿವ ತಂಗಡಿಗಿ ಮಂಗಳವಾರ ಸಂಜೆ 7.30ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ-50ರ ಮುಖಾಂತರ ಕನಕಗಿರಿಯಿಂದ ಬೆಂಗಳೂರು ಕಡೆ ಹೋಗುತ್ತಿದ್ದಾಗ ತಾಲ್ಲೂಕಿನ ಸಕಲಾಪುರಹಟ್ಟಿ ಗೊಲ್ಲರಹಟ್ಟಿ ಕ್ರಾಸ್ ಬಳಿ ಹಿಂದಿನಿಂದ ಬಂದ ಸಚಿವರ ಹೆಚ್ಚುವರಿ ವಾಹನ ಮುಂದೆ ಹೋಗುತ್ತಿದ್ದ ಹೆದ್ದಾರಿ ಗಸ್ತು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಗಸ್ತು ವಾನಹದಲ್ಲಿದ್ದ ಕೊಟ್ಟೂರು ಠಾಣೆಯ ಎಎಸ್ಐ ಹುಲಿಯಪ್ಪ ಅವರಿಗೆ ಒಳಪೆಟ್ಟಾಗಿದೆ. ನಂತರ ಸಚಿವರು ಗಾಯಾಳವನ್ನು ತಕ್ಷಣ ಅಸ್ಪತ್ರೆಗೆ ಕಳಿಸಿದ್ದು, ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಚಾಲಕನಿಗೆ ಯಾವುದೇ ಅಪಾಯವಾಗಿಲ್ಲ.
ಸ್ಥಳಕ್ಕೆ ಕೂಡ್ಲಿಗಿ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಂತರ ಸಚಿವರು ಬೆಂಗಳೂರಿನತ್ತ ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.