ADVERTISEMENT

ಸಿಂಗಟಾಲೂರು ಏತ ನೀರಾವರಿ ಯೋಜನೆ: ದಶಕ ಕಳೆದರೂ ಸಂತ್ರಸ್ತರಿಗಿಲ್ಲ ಭೂ ಪರಿಹಾರ

ಕೆ.ಸೋಮಶೇಖರ
Published 21 ಜುಲೈ 2025, 5:56 IST
Last Updated 21 ಜುಲೈ 2025, 5:56 IST
ಹೂವಿನಹಡಗಲಿ ತಾಲ್ಲೂಕಿನ ಮಾಗಳ ಮುಖ್ಯ ಕಾಲುವೆಯ ದುಸ್ಥಿತಿ
ಹೂವಿನಹಡಗಲಿ ತಾಲ್ಲೂಕಿನ ಮಾಗಳ ಮುಖ್ಯ ಕಾಲುವೆಯ ದುಸ್ಥಿತಿ   

ಹೂವಿನಹಡಗಲಿ: ಸದಾ ಬರಗಾಲಕ್ಕೆ ತುತ್ತಾಗುತ್ತಿದ್ದ ಈ ಭಾಗದ ಬರಡು ಭೂಮಿಗೆ ನೀರುಣಿಸುವ ಮಹತ್ವಾಕಾಂಕ್ಷಿ ‘ಸಿಂಗಟಾಲೂರು ಏತ ನೀರಾವರಿ ಯೋಜನೆ’ ಕಾರ್ಯಗತಗೊಂಡು 13 ವರ್ಷಗಳಾಗಿವೆ. ಪೂರ್ಣ ಅಚ್ಚುಕಟ್ಟಿಗೆ ಇನ್ನೂ ನೀರು ಹರಿದಿಲ್ಲ, ಕಾಲುವೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡವರಿಗೆ ಪರಿಹಾರ ಸಿಕ್ಕಿಯೇ ಇಲ್ಲ.

ಹೂವಿನಹಡಗಲಿ ತಾಲ್ಲೂಕಿನ ರಾಜವಾಳ, ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಮಧ್ಯದಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ 3.12 ಟಿಎಂಸಿ ಅಡಿ ಸಾಮರ್ಥ್ಯದ ಬ್ಯಾರೇಜ್ 2012ರಲ್ಲಿ ಉದ್ಘಾಟನೆಯಾಗಿದೆ.

ಬಲದಂಡೆ ಹೂವಿನಹಡಗಲಿ ತಾಲ್ಲೂಕಿನಲ್ಲಿ ಕಾಲುವೆ ನೀರಾವರಿಯಿಂದ 35,791 ಎಕರೆ, ಎಡ ದಂಡೆಯ ಗದಗ, ಕೊಪ್ಪಳ ಜಿಲ್ಲೆಯ 1,34,445 ಎಕರೆ ಸೂಕ್ಷ್ಮ ನೀರಾವರಿಗೆ ಒಳಪಟ್ಟಿದೆ.

ADVERTISEMENT

ತಾಲ್ಲೂಕಿನ ರಾಜವಾಳ ಶಾಖಾ ಕಾಲುವೆ ಮೂಲಕ 3,000 ಎಕರೆ, ಕೆ.ಅಯ್ಯನಹಳ್ಳಿ ಶಾಖಾ ಕಾಲುವೆಯಿಂದ 5,000 ಎಕರೆ, ಮಾಗಳ ಶಾಖಾ ಕಾಲುವೆಯಿಂದ 4,000 ಎಕರೆ, ಹೂವಿನಹಡಗಲಿ ಶಾಖಾ ಕಾಲುವೆಯಿಂದ 23,791 ಎಕರೆ ಅಚ್ಚುಕಟ್ಟು ವ್ಯಾಪ್ತಿಗೆ ಸೇರಿದೆ.

ಮಾಗಳ ಗ್ರಾಮದ ರೈತರ ಜಮೀನುಗಳಲ್ಲಿ ಕಾಲುವೆ ಕಿತ್ತು ಹೋಗಿರುವುದು

ಕಾಲುವೆಗಳ ದುರಸ್ತಿ, ನಿರ್ವಹಣೆ ಕೊರತೆಯಿಂದ 13 ವರ್ಷ ಕಳೆದರೂ ಕೊನೆಯ ಅಂಚಿನ ರೈತರಿಗೆ ನೀರು ತಲುಪಿಲ್ಲ. ಮಾಗಳ, ಅಯ್ಯನಹಳ್ಳಿ, ದಾಸರಹಳ್ಳಿ ತಾಂಡ ಬಳಿ ವಿತರಣಾ ಕಾಲುವೆಗಳು ಆಗಿಲ್ಲ. ಹೊಲಗಾಲುವೆಗಳು ನಿರ್ಮಾಣವಾಗದೇ ರೈತರು ಮೋಟಾರ್ ಅಳವಡಿಸಿಕೊಂಡೇ ಹೊಲಗಳಿಗೆ ನೀರು ಹರಿಸಿಕೊಳ್ಳಬೇಕಿದೆ. ಕೆಲ ರೈತರಿಗೆ ಯೋಜನೆ ವರದಾನವಾಗಿದ್ದರೆ, ಹಲವರಿಗೆ ನಿರಾಸೆ ತಂದಿದೆ.

ನೀರಾವರಿ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ ಶೇ 50ರಷ್ಟು ಅಚ್ಚುಕಟ್ಟಿಗೆ ನೀರು ಹರಿಯುತ್ತಿದೆ. ಇದನ್ನು ಅಲ್ಲಗಳೆಯುವ ರೈತರು ‘ಅಣ್ಣನ ಹೊಲಕ್ಕೆ ನೀರು ಹರಿದರೆ ತಮ್ಮನ ಹೊಲಕ್ಕೆ ಹರಿಯುತ್ತಿಲ್ಲ’ ಎಂದು ದೂಷಿಸುತ್ತಿದ್ದಾರೆ.

ಸಿಂಗಟಾಲೂರು ಯೋಜನೆ ಕಾಲುವೆಗಳಲ್ಲಿ ಗಿಡಗಂಟೆ ಬೆಳೆದಿರುವುದು

ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ಜಲ ಸಂಪನ್ಮೂಲ ಬಳಸಿಕೊಂಡು ತಾಲ್ಲೂಕನ್ನು ಬರಮುಕ್ತಗೊಳಿಸಬಹುದಾಗಿದ್ದರೂ ಇಚ್ಛಾಸಕ್ತಿಯ ಕೊರತೆಯಿಂದ ಅದು ಸಾಧ್ಯವಾಗಿಲ್ಲ ಎಂಬ ಆರೋಪ ರೈತರಿಂದ ಕೇಳಿ ಬರುತ್ತಿದೆ.

ಕೆ.ಅಯ್ಯನಹಳ್ಳಿ ಕಾಲುವೆಯಲ್ಲಿ ನೀರು ಹರಿಯುತ್ತಿರುವುದು
ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್
ಯೋಜನೆ ನಿರ್ವಹಣೆ ಸಮಸ್ಯೆ ಕುರಿತು ಸದನದಲ್ಲಿ ಗಮನ ಸೆಳೆದಿರುವೆ. ಹಲವು ಬಾರಿ ಸರ್ಕಾರಕ್ಕೆ ಪತ್ರ ಬರೆದಿದ್ದರೂ ನಿರ್ವಹಣೆಗೆ ಬಿಡಿಗಾಸು ನೀಡಿಲ್ಲ. ರೈತರಿಗೆ ಭೂ ಪರಿಹಾರ ಕೊಟ್ಟಿಲ್ಲ. ಬೇರೆ ದಾರಿ ಕಾಣಿಸದೇ ಜನರನ್ನು ಸಂಘಟಿಸಿ ಹೋರಾಟಕ್ಕೆ ಇಳಿಯುವ ಯೋಚನೆ ಮಾಡಿರುವೆ
ಕೃಷ್ಣನಾಯ್ಕ, ಶಾಸಕ ಹೂವಿನಹಡಗಲಿ
ಅನುದಾನ ಕೊರತೆಯಿಂದ ನಿರ್ವಹಣೆ ಸಮಸ್ಯೆಯಾಗಿದೆ. ಈ ಬಾರಿ ನರೇಗಾ ಅಡಿಯಲ್ಲಿ ಕೆಲವು ಕಾಲುವೆ ಹೂಳು ತೆಗೆಸಿದ್ದೇವೆ. ಪೂರ್ಣ ಅಚ್ಚುಕಟ್ಟಿಗೆ ನೀರು ಹರಿಸಲು ಯೋಜನೆ ಹಾಕಿಕೊಂಡಿದ್ದೇವೆ. ನೀರು ಬಳಕೆದಾರರ ಸಂಘ ರಚಿಸಿ ರೈತರಲ್ಲಿ ಅರಿವು ಮೂಡಿಸಲಾಗುವುದು
ಶಿವಮೂರ್ತಿ ಇಇ ಸಿಂಗಟಾಲೂರು ಏ.ನೀ.ಯೋ. ವಿಭಾಗ ಹಡಗಲಿ
ಇಡೀ ತಾಲ್ಲೂಕನ್ನು ಹಸಿರಾಗಿಸುವ ನೀರಾವರಿ ಯೋಜನೆಯನ್ನು ಎಂ.ಪಿ.ಪ್ರಕಾಶ್ ಮಾಡಿ ಹೋಗಿದ್ದಾರೆ. ನಿರ್ವಹಣೆ ಕೊರತೆಯಿಂದ ಕೊನೆಯ ಭಾಗದ ರೈತರು ಇನ್ನು ನೀರು ಕಂಡಿಲ್ಲ. ಚುನಾವಣೆಯಲ್ಲಿ ಮಾತ್ರ ಜನಪ್ರತಿನಿಧಿಗಳಿಗೆ ಈ ಯೋಜನೆ ನೆನಪಾಗುವುದು ದುರ್ದೈವ
ಎಲ್.ಸೋಮಿನಾಯ್ಕ ರೈತ ದಾಸರಹಳ್ಳಿ ತಾಂಡ
ಯೋಜನೆ ಉದ್ಘಾಟನೆಯಾಗಿ 13 ವರ್ಷವಾದರೂ ಪೂರ್ಣ ಅಚ್ಚುಕಟ್ಟಿಗೆ ನೀರು ಹರಿದಿಲ್ಲ. ತಾಂತ್ರಿಕ ಅಡೆತಡೆ ನಿವಾರಿಸಿ ಇಡೀ ತಾಲ್ಲೂಕಿಗೆ ನೀರಾವರಿ ಸೌಲಭ್ಯ ವಿಸ್ತರಿಸಬೇಕು. ಜಮೀನು ಕಳೆದುಕೊಂಡ ರೈತರಿಗೆ ಸರ್ಕಾರ ತಕ್ಷಣ ಭೂ ಪರಿಹಾರ ನೀಡಬೇಕು
ಎಂ.ಶಿವರಾಜ್ ಕಾರ್ಯದರ್ಶಿ ರೈತ ಸಂಘ ಹಡಗಲಿ
ಭೂ ಪರಿಹಾರ ಮರೀಚಿಕೆ
ಕಾಲುವೆಗೆ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳಿಗೆ ಸರ್ಕಾರ ಈವರೆಗೂ ಭೂ ಪರಿಹಾರ ನೀಡಿಲ್ಲ. ಮೇಲ್ಭಾಗದ ರೈತರು ಕಾಲುವೆಗೆ ಅಡ್ಡಗಟ್ಟಿ ನೀರು ಪಡೆಯುತ್ತಾರೆ. ಕೆಲವರು ಕಾಲುವೆಗೆ ಪೈಪ್ ಅಳವಡಿಸಿಕೊಂಡಿದ್ದಾರೆ. ಪರಿಹಾರ ಬಾರದ ಕಾರಣ ಕೆಲವರು ಕಾಲುವೆಗಳನ್ನೇ ಕಿತ್ತು ಹಾಕಿದ್ದಾರೆ. ಸರ್ಕಾರ ಭೂ ಪರಿಹಾರ ನೀಡದಿರುವುದರಿಂದ ಈ ರೀತಿಯ ದುರ್ಬಳಕೆ ತಡೆಯಲು ಸಾಧ್ಯವಾಗದೇ ಅಧಿಕಾರಿಗಳು ಅಸಹಾಯಕರಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ನಿರ್ವಹಣೆಗೆ ನಿರ್ಲಕ್ಷ್ಯ
₹63.62 ಕೋಟಿ ಮೂಲ ನೀರಾವರಿ ಯೋಜನೆ ₹5678 ಕೋಟಿಗೆ ಪರಿಷ್ಕರಣೆಗೊಂಡಿದೆ.  ಇಂತಹ ಬೃಹತ್ ಯೋಜನೆಯ ನಿರ್ವಹಣೆ ನಿರ್ಲಕ್ಷಿಸಿರುವುದರಿಂದ ನಾನಾ ಸಮಸ್ಯೆಗಳು ಕಾಡುತ್ತಿವೆ. ನಿರ್ವಹಣೆಗಾಗಿ ಪ್ರತಿವರ್ಷ ಕ್ರಿಯಾ ಯೋಜನೆ ಸಲ್ಲಿಕೆಯಾದರೂ ಸರ್ಕಾರ ಅನುದಾನ ನೀಡಿಲ್ಲ. ಈ ವರ್ಷ ನರೇಗಾ ಅಡಿಯಲ್ಲಿ ಕೆಲ ಕಾಲುವೆಗಳನ್ನು ಸ್ವಚ್ಛಗೊಳಿಸಲಾಗಿದೆ. ಉಳಿದೆಡೆ ಕಾಲುವೆಗಳಲ್ಲಿ ಗಿಡಗಂಟಿ ಬೆಳೆದು ಹೂಳು ತುಂಬಿಕೊಂಡಿವೆ. ನೀರೆತ್ತುವ ಘಟಕಗಳಿಗೆ ಹೆಚ್ಚುವರಿ ಟ್ರಾನ್ಸ್‌ಫಾರ್ಮರ್‌ ಅಳವಡಿಸಿಲ್ಲ. ಟಿಸಿ ದುರಸ್ತಿಗೀಡಾದರೆ ರಿಪೇರಿ ಆಗುವವರೆಗೆ ಮೋಟಾರ್ ಬಂದ್ ಆಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.