ADVERTISEMENT

ತಾಯಮ್ಮ ಶಕ್ತಿ ಸಂಘಕ್ಕೆ ದಶಮಾನೋತ್ಸವ ಸಂಭ್ರಮ: ಫೆ.1ರಂದು ಉದ್ಯೋಗ ಮೇಳ

​ಪ್ರಜಾವಾಣಿ ವಾರ್ತೆ
Published 23 ಜನವರಿ 2024, 14:14 IST
Last Updated 23 ಜನವರಿ 2024, 14:14 IST
ಕವಿತಾ ಈಶ್ವರ ಸಿಂಗ್
ಕವಿತಾ ಈಶ್ವರ ಸಿಂಗ್   

ಹೊಸಪೇಟೆ (ವಿಜಯನಗರ): ದಶಮಾನೋತ್ಸವ ಸಂಭ್ರಮದಲ್ಲಿರುವ ತಾಯಮ್ಮ ಶಕ್ತಿ ಸಂಘ, ಸಮಾಜಸೇವೆಯ ತನ್ನ ಕಾರ್ಯಕ್ಷೇತ್ರ ವಿಸ್ತರಿಸಿಕೊಳ್ಳಲು ನಿರ್ಧರಿಸಿದೆ. ಫೆ.1ರಂದು ಎನ್‌.ಜೆ.ನಗರದಲ್ಲಿ ಕಚೇರಿ ಆರಂಭದ ಜತೆಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷೆ ಕವಿತಾ ಈಶ್ವರ ಸಿಂಗ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರ ನರಸಾಪುರದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕಂಪನಿಗೆ 3 ಸಾವಿರ ಮಹಿಳಾ ಉದ್ಯೋಗಿಗಳು ಬೇಕಿದ್ದು, ಕಂಪನಿಯವರೇ ನಗರಕ್ಕೆ ಬಂದು 10, 12ನೇ ತರಗತಿ ಪಾಸಾದ 18ರಿಂದ 26 ವರ್ಷದೊಳಗಿನ ಮಹಿಳೆಯರನ್ನು ಆಯ್ಕೆ ಮಾಡಲಿದ್ದಾರೆ.  ಎಂದರು.

ಶೀಘ್ರದಲ್ಲಿಯೇ ಇಲ್ಲಿ ಅಗರಬತ್ತಿ ತಯಾರಿಕಾ ಘಟಕ ಆರಂಭಿಸಲಾಗುವುದು, ಇದರಿಂದ 20 ಮಂದಿಗೆ ಪೂರ್ಣಪ್ರಮಾಣದ ಕೆಲಸ ಸಿಗಲಿದೆ. ಸಂಘದಲ್ಲಿ ಈಗಾಗಲೇ ಒಂದು ಸಾವಿರ ಸದಸ್ಯರಿದ್ದು, ತಲಾ 15 ಮಹಿಳೆಯರು ಮತ್ತು ಪುರುಷರು ಇರುವ ನಿರ್ದೇಶಕರ ಮಂಡಳಿ ರಚಿಸಿ ಸೇವಾ ಕ್ಷೇತ್ರವನ್ನು ವಿಸ್ತರಿಸಲಾಗುವುದು. ಮಹಿಳೆಯರಿಗೆ ಹೊಲಿಗೆ ತರಬೇತಿಯನ್ನು ಈಗಾಗಲೇ ನೀಡುತ್ತಿದ್ದು, ಹಲವಾರು ಸೇವಾ ಕಾರ್ಯಗಳನ್ನು ನಡೆಸಲಾಗಿದೆ. ಹಲವು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ನೆರವಾಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ADVERTISEMENT

26ರಂದು ದಶಮಾನೋತ್ಸವ: ಸಂಘದ ದಶಮಾನೋತ್ಸವ ಕಾರ್ಯಕ್ರಮ ಜ.26ರಂದು ಸಂಜೆ 5 ಗಂಟೆಗೆ ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಸ್ಥಳೀಯ ಶಾಸಕರು, ಜಿಲ್ಲೆಯ ಹಿರಿಯ ಅಧಿಕಾರಿಗಳ ಸಹಿತ ಹಲವರು ಪಾಲ್ಗೊಳ್ಳಲಿದ್ದಾರೆ. ಸದಸ್ಯರಿಗೆ ₹5 ಲಕ್ಷದ ವಿಮಾ ರಕ್ಷೆ ಇರುವ ಆರೋಗ್ಯ ಕಾರ್ಡ್‌ ನೀಡಲಾಗುತ್ತದೆ ಎಂದರು.

ಸಂಘದ ಕಾರ್ಯದರ್ಶಿ ಕೆ.ರಾಘವೇಂದ್ರ, ಲಲಿತಾ ನಾಯ್ಕ್, ಎಸ್‌.ರಾಘವೇಂದ್ರ, ರಾಜು, ಪಿ.ಕೆ.ಹನುಮಂತ್‌, ಕೆ.ರಾಘವೇಂದ್ರ ಇದ್ದರು.

‘ರಾಜಕೀಯದಿಂದ ಸದ್ಯ ತಟಸ್ಥ’
ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ತಮಗೆ ಸೂಕ್ತ ಹೊಣೆಗಾರಿಕೆ ನೀಡದೆ ಮೂಲೆಗುಂಪು  ಮಾಡಿದ್ದಕ್ಕೆ ಪರೋಕ್ಷ ಬೇಸರ ವ್ಯಕ್ತಪಡಿಸಿದ ಕವಿತಾ ಸದ್ಯ ಸಂಘದ ಚಟುವಟಿಕೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ರಾಜಕೀಯದಿಂದ ತಟಸ್ಥವಾಗಿರುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ತಮ್ಮ ಆಯ್ಕೆಯನ್ನು ಮುಕ್ತವಾಗಿರಿಸಿಕೊಂಡಿರುವ ಸುಳಿವು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.