ಹರಪನಹಳ್ಳಿ: ಇಬ್ಬರು ಶಿಕ್ಷಕಿಯರ ಮನೆಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಎರಡು ಪ್ರತ್ಯೇಕ ಪ್ರಕರಣಗಳು ನಗರದಲ್ಲಿ ದಾಖಲಾಗಿದೆ.
ಬಾಣಗೇರಿ ನಿವಾಸಿ, ಶಿಕ್ಷಕಿ ಬಿ.ಶಹಾನಾಜ್ ಅವರು ಡಿ.30ರಂದು ಬೆಳಿಗ್ಗೆ ಶಾಲೆಗೆ ತೆರಳಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಅವರ ವೃದ್ಧ ತಾಯಿ ಮಲಗಿರುವ ವೇಳೆ ಕಳ್ಳರು ಪ್ರವೇಶಿಸಿ, ಬೆಡ್ ರೂಂ ಬಾಗಿಲ ಚಿಲಕ ಮುರಿದಿದ್ದಾರೆ. ಅಂದಾಜು ₹18.60 ಲಕ್ಷ ಮೌಲ್ಯದ 15 ತೊಲ ಬಂಗಾರದ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಶಹಾನಾಜ್ ಸಂಜೆ ಮನೆ ತಲುಪಿದಾಗ ಘಟನೆ ಅರಿವಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಪ್ರೌಢಶಾಲೆ ಶಿಕ್ಷಕಿ ಎಚ್.ವೀರಮ್ಮ ಅವರ ಮನೆಯಲ್ಲಿ ಅ.21ರಂದು ₹2.20 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿದ್ದು, ಡಿ.31ರಂದು ದೂರು ದಾಖಲಿಸಲಾಗಿದೆ. ವೀರಮ್ಮ ಅವರ ಮನೆಯಲ್ಲಿ 20 ಗ್ರಾಂ ಬಂಗಾರದ ಬಳೆ, 500 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳವಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.