ADVERTISEMENT

ವಿಜಯನಗರ | ಎರಡು ಪ್ರತ್ಯೇಕ ಬಾಲ್ಯ ವಿವಾಹ; ಮೂವರ ನ್ಯಾಯಾಂಗ ಬಂಧನ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 12:36 IST
Last Updated 6 ಜನವರಿ 2022, 12:36 IST
ಡಾ. ಅರುಣ್‌ ಕೆ.
ಡಾ. ಅರುಣ್‌ ಕೆ.   

ಹೊಸಪೇಟೆ (ವಿಜಯನಗರ): ಜಿಲ್ಲೆಯ ಎರಡು ಕಡೆ ನಡೆದ ಪ್ರತ್ಯೇಕ ಬಾಲ್ಯ ವಿವಾಹಗಳಿಗೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹೊಸಪೇಟೆ ತಾಲ್ಲೂಕಿನಲ್ಲಿ ನಡೆದ ಪ್ರಕರಣ ಸಂಬಂಧ ಕರ್ಣ (21) ಎಂಬ ಯುವಕನನ್ನು ಬಂಧಿಸಿದರೆ, ಹರಪನಹಳ್ಳಿ ತಾಲ್ಲೂಕಿನ ಹಲವಾಗಲು ಪೊಲೀಸರು, ನಿಂಗರಾಜು ಹಾಗೂ ಈತನಿಗೆ ಸಹಕಾರ ನೀಡಿದ ದೇವರಾಜನನ್ನು ಬಂಧಿಸಿದ್ದಾರೆ.

‘ಇತ್ತೀಚೆಗೆ ಬಂದ ದೂರುಗಳ ಅನ್ವಯ ಕರ್ಣ, ನಿಂಗರಾಜ, ದೇವರಾಜ ಎಂಬುವರನ್ನು ವಶಕ್ಕೆ ಪಡೆದು, ಪೋಕ್ಸೋ, ಬಾಲ್ಯವಿವಾಹ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತ ಬಾಲಕಿಯರನ್ನು ಬಳ್ಳಾರಿಯ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕೇಂದ್ರದಲ್ಲಿರಿಸಿ ಕೌನ್ಸೆಲಿಂಗ್‌ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಗುರುವಾರ ನಗರದಲ್ಲಿ ತಿಳಿಸಿದರು.

ADVERTISEMENT

ಅನಗತ್ಯ ಓಡಾಟ ನಿಷೇಧ:‘ಶುಕ್ರವಾರ ರಾತ್ರಿಯಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದ್ದು, ಈಗಾಗಲೇ ಜಿಲ್ಲೆಯ ಎಲ್ಲಾ ಠಾಣೆಗಳಿಗೂ ಸೂಚನೆ ನೀಡಲಾಗಿದೆ. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ. ಕರ್ಫ್ಯೂ ಸಮಯದಲ್ಲಿ ಅನಗತ್ಯ ಓಡಾಟದ ಮೇಲೆ ನಿಷೇಧವಿದೆ. ಮದುವೆಗೆ ನಿಗದಿ ಪಡಿಸಿದ ಜನರನ್ನು ಹೊರತುಪಡಿಸಿ ಯಾವುದೆ ಸಭೆ, ಸಮಾರಂಭ, ಜಾತ್ರೆ, ಪ್ರತಿಭಟನೆಗಳು ನಡೆಸಲು ಅವಕಾಶ ಇಲ್ಲ. ಪ್ರವಾಸಿ ತಾಣಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ’ ಎಂದು ಮಾಹಿತಿ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.