ADVERTISEMENT

ವಿಜಯನಗರ ಹೊಸ ಎಸ್ಪಿಯಾಗಿ ಶ್ರೀಹರಿಬಾಬು ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 9:58 IST
Last Updated 5 ನವೆಂಬರ್ 2022, 9:58 IST
ವಿಜಯನಗರ ಹೊಸ ಎಸ್ಪಿಯಾಗಿ ಶ್ರೀಹರಿಬಾಬು ಅಧಿಕಾರ ಸ್ವೀಕಾರ
ವಿಜಯನಗರ ಹೊಸ ಎಸ್ಪಿಯಾಗಿ ಶ್ರೀಹರಿಬಾಬು ಅಧಿಕಾರ ಸ್ವೀಕಾರ   

ಹೊಸಪೇಟೆ (ವಿಜಯನಗರ): ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ., ಎಸ್ಪಿ ಡಾ. ಅರುಣ್‌ ಕೆ. ಅವರನ್ನು ವಿಜಯನಗರ ಜಿಲ್ಲೆಯಿಂದ ಬೇರೆಡೆ ವರ್ಗಾವಣೆ ಮಾಡಿರುವುದರ ವಿರುದ್ಧ ಜಿಲ್ಲೆಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಶ್ರೀಹರಿ ಬಾಬು ಬಿ.ಎಲ್‌. ಅವರು ಶನಿವಾರ ನೂತನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಡಾ. ಅರುಣ್‌ ಕೆ. ಅವರು ಶ್ರೀಹರಿಬಾಬು ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನೂತನ ಎಸ್ಪಿ ಸ್ವಾಗತಿಸಿದ ಅಧಿಕಾರಿಗಳು, ಸಿಬ್ಬಂದಿ, ನಿರ್ಗಮಿತ ಎಸ್ಪಿಗೆ ಬೀಳ್ಕೊಟ್ಟರು.

ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಹರಿಬಾಬು, ನೂತನ ವಿಜಯನಗರ ಜಿಲ್ಲೆಯಲ್ಲಿ ಪೊಲೀಸ್‌ ಇಲಾಖೆಯನ್ನು ವ್ಯವಸ್ಥಿತವಾಗಿ ಡಾ. ಅರುಣ್‌ ಅವರು ಕಟ್ಟಿದ್ದಾರೆ. ಅವರ ಮಾರ್ಗದರ್ಶನ, ಸಲಹೆ ಪಡೆದು ಮುನ್ನಡೆಯಲಾಗುವುದು. ಅರುಣ್‌ ಉತ್ತಮ ಕೆಲಸ ಮಾಡಿದ್ದಾರೆ. ಅವರಂತೆಯೇ ಕೆಲಸ ಮಾಡಲು ಪ್ರಯತ್ನಿಸುತ್ತೇನೆ. ನನ್ನ ಅವಧಿಯಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ADVERTISEMENT

ಎಸ್ಪಿ ವರ್ಗಾವಣೆ ರಾಜಕೀಯ ನಿರ್ಧಾರ. ಯಾವುದೇ ಒತ್ತಡಕ್ಕೆ ಒಳಗಾಗದೆ ಇಲಾಖೆಯ ಎಲ್ಲ ಅಧಿಕಾರಿಗಳು, ಸಿಬ್ಬಂದಿಯ ಸಹಕಾರದೊಂದಿಗೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.

3 ವರ್ಷಗಳ ಕೆಲಸ 1 ವರ್ಷದಲ್ಲಿ ಮಾಡಿರುವೆ - ಡಾ. ಅರುಣ್‌
‘ವಿಜಯನಗರ ಜಿಲ್ಲೆಯಲ್ಲಿ ಮೂರು ವರ್ಷದೊಳಗೆ ಆಗಬೇಕಿದ್ದ ಕೆಲಸಗಳನ್ನು ಒಂದು ವರ್ಷದಲ್ಲಿ ಮಾಡಿರುವೆ. ನೂರಕ್ಕೆ ನೂರರಷ್ಟು ಕೆಲಸ ಮಾಡಿದ ತೃಪ್ತಿ ಇದೆ. ಹೊಸ ಕಚೇರಿ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಮೂಲಸೌಕರ್ಯ ಒದಗಿಸುವ ಕೆಲಸಗಳಾಗಬೇಕಿದೆ ಅಷ್ಟೇ. ನನ್ನ ಅವಧಿಯಲ್ಲಾದ ಬಹುತೇಕ ಅಪರಾಧ ಪ್ರಕರಣಗಳಲ್ಲಿ ಬಂಧನ, ಜಪ್ತಿಯಾಗಿದೆ’ ಎಂದು ಎಸ್ಪಿ ಡಾ. ಅರುಣ್‌ ಕೆ. ಹೇಳಿದರು.

‘ವಿಜಯನಗರ ಜಿಲ್ಲೆ ಶಾಂತಿಗೆ ಹೆಸರಾಗಿದೆ. ಜನರ ಸಹಕಾರ, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯ ಸಹಕಾರದಿಂದ ಉತ್ತಮ ಕೆಲಸ ಮಾಡಲು ಸಾಧ್ಯವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.