ADVERTISEMENT

ಹೊಸಪೇಟೆ: ಉದ್ಯಮಿಗಳು, ವರ್ತಕರಿಗೆ ಜಿಎಸ್‌ಟಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 10 ಮೇ 2022, 10:31 IST
Last Updated 10 ಮೇ 2022, 10:31 IST
ಉದ್ಯಮಿಗಳು, ವರ್ತಕರಿಗೆ ಜಿಎಸ್‌ಟಿ ಕಾರ್ಯಾಗಾರ
ಉದ್ಯಮಿಗಳು, ವರ್ತಕರಿಗೆ ಜಿಎಸ್‌ಟಿ ಕಾರ್ಯಾಗಾರ   

ಹೊಸಪೇಟೆ (ವಿಜಯನಗರ): ‘ಜಿಲ್ಲೆಯ ಎಲ್ಲ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉದ್ಯಮಿಗಳು, ವರ್ತಕರಿಗೆ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಹೊಸ ನಿಯಮಗಳ ಬಗ್ಗೆ ಗುರುವಾರ (ಮೇ 12) ನಗರದ ಮಲ್ಲಿಗಿ ಹೋಟೆಲ್‌ನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ’ ಎಂದು ವಿಜಯನಗರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಅಧ್ಯಕ್ಷ ಅಶ್ವಿನ್‌ ಕೋತಂಬ್ರಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಅತಿ ಹೆಚ್ಚಿನ ಹಣಕಾಸಿನ ವಹಿವಾಟು ನಡೆಸುತ್ತಿದ್ದವರಿಗೆ ಜಿಎಸ್‌ಟಿಯಲ್ಲಿ ಇ–ಇನ್‌ವೈಸ್‌ ಕಡ್ಡಾಯಗೊಳಿಸಲಾಗಿತ್ತು. ಈಗ ಎಲ್ಲರಿಗೂ ಅನ್ವಯಿಸುವಂತೆ ಮಾರ್ಪಾಡುಗೊಳಿಸಲಾಗಿದೆ. ಇ–ಇನ್‌ವೈಸ್‌, ಇ–ವೇ ಬಿಲ್‌ ಕುರಿತು ಕಾರ್ಯಾಗಾರದಲ್ಲಿ ತಿಳಿವಳಿಕೆ ಮೂಡಿಸಲಾಗುತ್ತದೆ. ವಾಣಿಜ್ಯ ತೆರಿಗೆ ಇಲಾಖೆಯ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

‘ಮೇ 12ರಂದು ಬೆಳಿಗ್ಗೆ 9.30ಕ್ಕೆ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಬಿ.ವಿ. ಮುರಳಿಕೃಷ್ಣ ಉದ್ಘಾಟಿಸುವರು. ದಾವಣಗೆರೆ ವಿಭಾಗದ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ವಿಶ್ವನಾಥ ಪಾಲ್ಗೊಳ್ಳುವರು. ಟ್ಯಾಲಿ ಸಲ್ಯೂಶನ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಎಜಿಎಮ್‌ ಸಿ.ಜಿ. ಷಣ್ಮುಖ ಅವರು ಟ್ಯಾಲಿ ಮೂಲಕ ಇನ್‌ವೈಸ್‌ ಮಾಡುವುದನ್ನು ತಿಳಿಸುವರು. ಜಿಲ್ಲೆಯ ಎಲ್ಲ ಸಣ್ಣ, ಮಧ್ಯಮ ಕೈಗಾರಿಕೆ ಉದ್ಯಮಿಗಳು, ವರ್ತಕರಿಗೆ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಜಿಲ್ಲೆಯಲ್ಲಿ 300ಕ್ಕೂ ಅಧಿಕ ಸಣ್ಣ ಕೈಗಾರಿಕೆಗಳಿವೆ. ಕೈಗಾರಿಕೆ ಪ್ರದೇಶ ಸ್ಥಾಪನೆಗೆ 500 ಎಕರೆ ಜಾಗ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಕೋರಿಕೆ ಸಲ್ಲಿಸಲಾಗಿದೆ. ಮರಿಯಮ್ಮನಹಳ್ಳಿ ಹಾಗೂ ಹಗರಿಬೊಮ್ಮನಹಳ್ಳಿ ನಡುವೆ ಜಾಗ ಸಿಗುವ ನಿರೀಕ್ಷೆ ಇದೆ ಎಂದು ಪ್ರಶ್ನೆಗೆ ತಿಳಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಾಕುಬಾಳು, ಖಜಾಂಚಿ ವಿಜಯ ಸಿಂಧಗಿ, ಕಾರ್ಯಕಾರಿಣಿ ಸದಸ್ಯ ಮಹೇಂದ್ರ ಜೈನ್‌ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.