ಕುರುಗೋಡು: ಪಟ್ಟಣದಲ್ಲಿ ಮೊಹರಂ ಅಂಗವಾಗಿ ಪೀರಲ ದೇವರುಗಳ ಕಡೆ ಸವಾರಿ ಮೆರವಣಿಗೆ ಭಾನುವಾರ ಸಂಭ್ರಮದಿಂದ ಜರುಗಿತು.
ಮೊಹರಂ ಅಂಗವಾಗಿ ಶನಿವಾರ ರಾತ್ರಿ ಪಟ್ಟಣದ ಏಳು ಮಸೀದಿಗಳಲ್ಲಿ ಪ್ರತಿಷ್ಠಾಪಿಸಿದ್ದ ವಿವಿಧ ಹೆಸರಿನ ಪೀರಲ ದೇವರುಗಳಿಗೆ ಭಕ್ತರು ಕೆಂಪುಸಕ್ಕರೆ ಮತ್ತು ಮಾದೇಲಿ ಅರ್ಪಿಸಿ ಹರಕೆ ತೀರಿಸಿದರು. ಕೆಲವು ಭಕ್ತರು ಮಸೀದಿಗಳ ಮುಂದೆ ಹಾಕಿದ್ದ ಅಗ್ನಿ ಕುಂಡದಲ್ಲಿ ಉಪ್ಪು ಮತ್ತು ಕಟ್ಟಿಗೆ ಸಮರ್ಪಿಸಿ ಭಕ್ತಿಮೆರೆದರು.
ಕೆಲವು ಭಕ್ತರು ಹುಲಿ ವೇಷ ಧರಿಸಿ ಹರಕೆ ತೀರಿಸಿದರೆ ಇನ್ನೂ ಕೆಲವರು ಮಸೀದಿಗಳ ಮುಂಭಾಗದ ಅಗ್ನಿಕುಂಡದಲ್ಲಿ ನಡೆಯುವ ಮೂಲಕ ಭಕ್ತಿ ಪರಾಕಾಷ್ಟೆ ಮೆರೆದರು.
ಭಾನುವಾರ ಸಂಜೆ ಪೀರಲ ದೇವರುಗಳ ಕೊನೆಯ ಸವಾರಿಗೆ ಸಿದ್ದವಾಗಿ ಪಟ್ಟಣದ ದೊಡ್ಡಬಸವೇಶ್ವರ ದೇವಸ್ಥಾನದ ಮುಂಭಾಗದ ಬಯಲಿನಲ್ಲಿ ಸೇರಿದ ಸಂದರ್ಭದಲ್ಲಿ ದೇವರುಗಳ ಮೆರವಣಿಗೆಯ ಸೊಬಗನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಪೀರಲ ದೇವರುಗಳಿಗೆ ಮಂಡಕ್ಕಿ ಮತ್ತು ಬೆಲ್ಲ ಎಸೆದು ಭಕ್ತಿ ಮೆರೆದರು. ಕೆಲವು ಜನರು ತಮಟೆಯ ತಾಳಕ್ಕೆ ಹೆಜ್ಜೆಹಾಕುತ್ತಿರುವ ದೃಶ್ಯಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.