ಹೊಸಪೇಟೆ (ವಿಜಯನಗರ): ವಿಜಯಪುರ–ಯಶವಂತಪುರ (ಗಾಡಿ ಸಂಖ್ಯೆ 06546) ಪ್ರಯಾಣಿಕ ರೈಲಿನ ಸಮಯವನ್ನು ನೈರುತ್ಯ ರೈಲ್ವೆ ಬದಲಿಸಿ ಆದೇಶ ಹೊರಡಿಸಿದೆ.
ವಿಜಯಪುರ ಕಡೆಯಿಂದ ಯಶವಂತಪುರ ಕಡೆಗೆ ಹೋಗುವ ರೈಲಿನ ಸಮಯ ಬದಲಿಸಲಾಗಿದೆ. ಜ. 23ರಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ಆದರೆ, ಯಶವಂತಪುರದಿಂದ ವಿಜಯಪುರ ಕಡೆಗೆ ಸಂಚರಿಸುವ ರೈಲಿನ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಪರಿಷ್ಕೃತ ವೇಳಾಪಟ್ಟಿ ಪ್ರಕಾರ, ಈ ರೈಲು ಪ್ರತಿದಿನ ಮಧ್ಯಾಹ್ನ 3ಕ್ಕೆ ವಿಜಯಪುರದಿಂದ ನಿರ್ಗಮಿಸಿ ಬಾದಾಮಿ–ಬಾಗಲಕೋಟೆ–ಗದಗ ಮಾರ್ಗವಾಗಿ ರಾತ್ರಿ 8.20ಕ್ಕೆ ಹೊಸಪೇಟೆ ತಲುಪಲಿದೆ. ರಾತ್ರಿ 9.35ಕ್ಕೆ ಹಗರಿಬೊಮ್ಮನಹಳ್ಳಿ, ರಾತ್ರಿ 10.15ಕ್ಕೆ ಕೊಟ್ಟೂರು, ರಾತ್ರಿ 11.05ಕ್ಕೆ ಹರಪನಹಳ್ಳಿ ತಲುಪಲಿದೆ. ಬೆಳಿಗ್ಗೆ 5.05ಕ್ಕೆ ಯಶವಂತಪುರ ಸೇರಲಿದೆ. ಇನ್ನು, ಈ ಹಿಂದಿನಂತೆ ರಾತ್ರಿ 9.30ಕ್ಕೆ ಯಶವಂತಪುರದಿಂದ ನಿರ್ಗಮಿಸುವ ರೈಲು ಬೆಳಗಿನ ಜಾವ 5.50ಕ್ಕೆ ಹೊಸಪೇಟೆ ಬಂದು ಸೇರಲಿದೆ. ಗದಗ ಮಾರ್ಗವಾಗಿ ಮಧ್ಯಾಹ್ನ 11.45ಕ್ಕೆ ವಿಜಯಪುರ ತಲುಪಲಿದೆ.
ತತ್ಕಾಲ್ ವಿಶೇಷ ರೈಲಾಗಿರುವ ಇದರ ಪ್ರಯಾಣ ದರ ಹೆಚ್ಚಾಗಿದ್ದು, ಬಡವರು, ಮಧ್ಯಮ ವರ್ಗದವರಿಗೆ ಹೊರೆಯಾಗಿದೆ. ಅದನ್ನು ಕಡಿಮೆಗೊಳಿಸಬೇಕೆಂದು ವಿಜಯನಗರ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ವೈ.ಯಮುನೇಶ್, ಪ್ರಧಾನ ಕಾರ್ಯದರ್ಶಿ ಕೆ. ಮಹೇಶ್ ಆಗ್ರಹಿಸಿದ್ದಾರೆ. ರೈಲಿನ ಸಮಯ ಬದಲಿಸಿರುವ ನೈರುತ್ಯ ರೈಲ್ವೆ ವಲಯದ ಕ್ರಮವನ್ನು ಸ್ವಾಗತಿಸಿರುವ ಅವರು, ಇದಕ್ಕಾಗಿ ಶ್ರಮಿಸಿದ ಸಂಸದ ವೈ.ದೇವೇಂದ್ರಪ್ಪ ಅವರಿಗೆ ಕೃತಜ್ಞತೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.