ADVERTISEMENT

ವಿಕಾಸ ಬ್ಯಾಂಕ್‌ ಬೆಳ್ಳಿ ಹಬ್ಬದ ಅಂಗವಾಗಿ ಕಥೆ, ಕವನ ಸ್ಪರ್ಧೆ

29ರಿಂದ ರಾಷ್ಟ್ರೀಯ ಜಂಪ್‌ರೋಪ್‌ ಚಾಂಪಿಯನ್‌ಶಿಪ್‌

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 10:34 IST
Last Updated 9 ಜುಲೈ 2022, 10:34 IST
   

ಹೊಸಪೇಟೆ (ವಿಜಯನಗರ): ‘ವಿಕಾಸ ಸೌಹಾರ್ದ ಕೋ–ಆಪರೇಟಿವ್‌ ಬ್ಯಾಂಕಿನ ಬೆಳ್ಳಿ ಹಬ್ಬದ ಅಂಗವಾಗಿ ಜು. 29ರಿಂದ 31ರ ವರೆಗೆ ರಾಷ್ಟ್ರೀಯ ಸಬ್‌ ಜ್ಯೂನಿಯರ್‌ ಜಂಪ್‌ರೋಪ್‌ ಚಾಂಪಿಯನ್‌ಶಿಪ್‌ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ತಿಳಿಸಿದರು.

‘ಇದೇ ವೇಳೆ 36 ಗಂಟೆಗಳ ‘ಡಬಲ್‌ ಡಚ್‌’ ಸ್ಪರ್ಧೆ ಕೂಡ ಆಯೋಜಿಸಲಾಗಿದೆ. ‘ಡಬಲ್‌ ಡಚ್‌’ನಲ್ಲಿ ಇದುವರೆಗಿನ ದಾಖಲೆ 24 ಗಂಟೆ ಇದೆ. ಸತತ 36 ಗಂಟೆ ನಡೆಸಿ, ದಾಖಲೆ ಮುರಿಯಲಾಗುವುದು’ ಎಂದು ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಸ್ಪರ್ಧೆಯಲ್ಲಿ ದೇಶದ 18 ರಾಜ್ಯಗಳ ತಂಡಗಳು ಭಾಗವಹಿಸಲಿವೆ. ಇನ್ನಷ್ಟು ರಾಜ್ಯಗಳು ಮುಂದೆ ಬಂದಿವೆ. ಅಂದಾಜು 500 ಸಬ್ ಜ್ಯೂನಿಯರ್‌, ಜ್ಯೂನಿಯರ್‌, ಸೀನಿಯರ್‌ ಕ್ರೀಡಾಪಟುಗಳು ಭಾಗವಹಿಸುವರು. ಸ್ಥಳೀಯರಿಗೂ ಪಾಲ್ಗೊಳ್ಳಲು ಅವಕಾಶ ಇದೆ. ಅವರಿಗೆ ನಗರದ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ತರಬೇತಿ ಕೂಡ ನೀಡಲಾಗುತ್ತದೆ ಎಂದು ತಿಳಿಸಿದರು.

ADVERTISEMENT

ಕಥೆ, ಕವನ ಸ್ಪರ್ಧೆ:
ಬ್ಯಾಂಕಿಂಗ್‌ ಕ್ಷೇತ್ರದ ತಜ್ಞರಾಗಿದ್ದ ಕೆ. ಉಮಾಶಂಕರ ಬೋಸ್‌ ಸ್ಮರಣಾರ್ಥ ಕಥಾ ಸ್ಪರ್ಧೆ ಆಯೋಜಿಸಲಾಗಿದೆ. ‘ಸಂಧ್ಯಾಕಾಲ’ ಸ್ಪರ್ಧೆಯ ಶೀರ್ಷಿಕೆ. ಕೆ.ಆರ್‌. ರಂಗನಾಥ ಅವರ ನೆನಪಿನಲ್ಲಿ ‘ವಿಕಾಸ’ ಕವನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಕಥೆ ಮೂರು ಸಾವಿರ ಪದ ಮೀರಬಾರದು. ಕವನ 15 ರಿಂದ 30 ಸಾಲುಗಳ ಒಳಗಿರಬೇಕು. ಆಸಕ್ತರು ಕಥೆ, ಕವನಗಳನ್ನು ಜು. 25ರೊಳಗೆ vikasbank.silverjubilee@gmail.com ಇಮೇಲ್‌ ಕಳಿಸಬಹುದು ಅಥವಾ ವಿಕಾಸ ಬ್ಯಾಂಕ್‌ ರಜತ ಮಹೋತ್ಸವ ಸಮಿತಿ, ವಿಕಾಸ ಸೌಹಾರ್ದ ಕೋ ಆಪರೇಟಿವ್‌ ಬ್ಯಾಂಕ್‌ ಕೇಂದ್ರ ಕಚೇರಿ, ಸ್ಟೇಶನ್‌ ರಸ್ತೆ, ಹೊಸಪೇಟೆ–583201 ಕಳಿಸಬಹುದು ಎಂದರು.
ಕಥಾ ಸ್ಪರ್ಧೆಯಲ್ಲಿ ₹10 ಸಾವಿರ ಪ್ರಥಮ, ₹5 ಸಾವಿರ ದ್ವಿತೀಯ, ₹2,500 ತೃತೀಯ ಹಾಗೂ ಇಬ್ಬರಿಗೆ ತಲಾ ₹1 ಸಾವಿರ ಸಮಾಧಾನಕರ ಬಹುಮಾನ ನೀಡಲಾಗುತ್ತದೆ. ಕವನ ಸ್ಪರ್ಧೆಯಲ್ಲಿ ಪ್ರಥಮ ಬಂದವರಿಗೆ ₹5 ಸಾವಿರ, ₹3 ಸಾವಿರ ದ್ವಿತೀಯ, ₹2 ಸಾವಿರ ತೃತೀಯ ಹಾಗೂ ಇಬ್ಬರಿಗೆ ತಲಾ ಒಂದು ಸಾವಿರ ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಬ್ಯಾಂಕಿನ ನಿರ್ದೇಶಕರಾದ ಎಂ. ವೆಂಕಪ್ಪ, ವ್ಯವಸ್ಥಾಪಕ ಗವಿಸಿದ್ದಪ್ಪ, ಜಂಪ್‌ ರೋಪ್‌ ಅಸೋಸಿಯೇಶನ್‌ ಕಾರ್ಯದರ್ಶಿ ಅಬ್ದುಲ್‌ ರಜಾಕ್‌, ನಿರ್ದೇಶಕ ಅನಂತ ಜೋಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.