ADVERTISEMENT

ಹಂಪಿಯಲ್ಲಿ ಹೋಂ ಸ್ಟೇಗೆ ಚಿಂತನೆ: ಆನಂದ್ ಸಿಂಗ್

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 7:41 IST
Last Updated 1 ನವೆಂಬರ್ 2021, 7:41 IST
ಆನಂದ್ ಸಿಂಗ್
ಆನಂದ್ ಸಿಂಗ್   

ಹೊಸಪೇಟೆ:‘ಹಂಪಿಯ ಜನತಾ ಕಾಲೊನಿಯಲ್ಲಿ ಈಗಿರುವ ಮನೆಗಳಲ್ಲಿ ಹೋಂ ಸ್ಟೇ ನಡೆಸುವುದಕ್ಕೆ ಅವಕಾಶ ಕಲ್ಪಿಸುವ ಕುರಿತು ಚಿಂತನೆ ನಡೆದಿದೆ’ ಎಂದು ಸಚಿವ ಆನಂದ್‌ ಸಿಂಗ್‌ ಹೇಳಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಅಲ್ಲಿರುವ ಮನೆಗಳಲ್ಲಿ ಕನಿಷ್ಠ ಎರಡು ಕೊಠಡಿಗಳ ಹೋಂ ಸ್ಟೇ ನಡೆಸುವುದಕ್ಕೆ ಅವಕಾಶ ಕಲ್ಪಿಸಿದರೆ ಪ್ರವಾಸಿಗರಿಗೆ ಅನುಕೂಲವಾಗುತ್ತದೆ. ಜನತಾ ಕಾಲೊನಿಯಲ್ಲಿನ ಮನೆಗಳ ತೆರವಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ನ್ಯಾಯಾಲಯದ ಆದೇಶ ಹೊರಬಿದ್ದ ಬಳಿಕ ಅದರ ಬಗ್ಗೆ ಚರ್ಚಿಸಿ ಮುಂದುವರೆಯಲಾಗುವುದು’ ಎಂದು ತಿಳಿಸಿದರು.

ADVERTISEMENT

ಪುನೀತ್‌ ರಾಜಕುಮಾರ್ ಪುತ್ಥಳಿ ಸ್ಥಾಪನೆ’
‘ಹೊಸಪೇಟೆ ನಗರದಲ್ಲಿ ನಟ ದಿವಂಗತ ಪುನೀತ್‌ ರಾಜಕುಮಾರ್‌ ಅವರ ಪುತ್ಥಳಿ ಸ್ಥಾಪಿಸುವ ಯೋಜನೆ ಇದೆ’ ಎಂದು ಸಚಿವ ಆನಂದ್‌ ಸಿಂಗ್ ಹೇಳಿದರು.
‘ಕಾಟಾಚಾರಕ್ಕೆ ಯಾವುದೋ ವೃತ್ತದಲ್ಲಿ ಪುತ್ಥಳಿ ಸ್ಥಾಪಿಸಿದರೆ ಪ್ರಯೋಜನವಿಲ್ಲ. ಅದರ ಸೂಕ್ತ ನಿರ್ವಹಣೆ ಆಗಬೇಕು. ಎಲ್ಲಾದರೂ ಒಂದು ಉದ್ಯಾನವನ ನಿರ್ಮಿಸಿ, ಅಲ್ಲಿ ಪುತ್ಥಳಿ ಸ್ಥಾಪಿಸುವ ಯೋಚನೆ ಇದೆ. ಅದಕ್ಕಾಗಿ ಎಲ್ಲ ಸಂಘ ಸಂಸ್ಥೆಗಳ ಸಭೆ ಕರೆದು, ಅಭಿಪ್ರಾಯ ಆಲಿಸಿ ಮುಂದುವರೆಯಲಾಗುವುದು’ ಎಂದರು.
‘ಪುನೀತ್‌ ಅವರ ಸಾವಿನಿಂದ ವೈಯಕ್ತಿಕವಾಗಿ ನನಗೆ ಬಹಳ ಆಘಾತ, ನೋವಾಗಿದೆ. ಸಣ್ಣ ವಯಸ್ಸಿನಲ್ಲಿ ಅವರಿಗೆ ಹೀಗಾಗಬಾರದಿತ್ತು. ದೊಡ್ಡ ನಟನಾಗಿ, ಉತ್ತಮ ವ್ಯಕ್ತಿತ್ವದಿಂದ ಎಲ್ಲರ ಮನಗೆದ್ದಿದ್ದರು. ಡಾ. ರಾಜ್‌ ಕುಮಾರ್‌ ಕುಟುಂಬ ಸದಸ್ಯರ ವ್ಯಕ್ತಿತ್ವವೇ ಬೇರೆ. ಅವರು ಎಲ್ಲರಿಗೂ ಮಾದರಿ’ ಎಂದು ಕೊಂಡಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.