ಹೊಸಪೇಟೆ (ವಿಜಯನಗರ): ವಿಜಯನಗರ ಉಪಕಾಲುವೆಗಳಲ್ಲಿ ಒಂದಾಗಿರುವ ಇಲ್ಲಿನ ರಾಯ ಕಾಲುವೆಯಲ್ಲಿ ದಟ್ಟವಾಗಿ ಬೆಳೆದು ನಿಂತಿದ್ದ ಕಳೆಯನ್ನು ತುಂಗಭದ್ರಾ ನೀರಾವರಿ ಇಲಾಖೆಯವರು ಸೋಮವಾರ ತೆರವುಗೊಳಿಸಿದ್ದಾರೆ.
ಕಳೆ ತೆಗೆದಿರುವುದರಿಂದ ಈಗ ನೀರು ಸರಾಗವಾಗಿ ಹರಿಯುತ್ತಿದೆ. ಕಾಲುವೆಯ ಮಧ್ಯದಲ್ಲಿಯೇ ಕಳೆ, ಅಕ್ಕಪಕ್ಕ ಪೊದೆ ಬೆಳೆದಿದ್ದರಿಂದ ನೀರು ಸರಾಗವಾಗಿ ಹರಿಯುತ್ತಿರಲಿಲ್ಲ. ಕಾಲುವೆಯ ಕೊನೆಯ ಭಾಗದ ರೈತರಿಗೆ ಸಮಸ್ಯೆಯಾಗುತ್ತಿತ್ತು. ಈ ಕುರಿತು ಸೋಮವಾರ ‘ಕಾಲುವೆ ಕೊನೆ ಭಾಗಕ್ಕೆ ತಲುಪದ ನೀರು’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟಿಸಿತ್ತು.
‘ರೈತರು ಈ ಕುರಿತು ಅನೇಕ ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ‘ಪ್ರಜಾವಾಣಿ’ಯಲ್ಲಿ ಬಂದ ವರದಿ ಬಳಿಕವಾದರೂ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಎಲ್ಲ ಉಪಕಾಲುವೆಗಳಲ್ಲಿ ಇದೇ ರೀತಿ ಕಳೆ ಬೆಳೆದಿದ್ದು, ಹಂತ ಹಂತವಾಗಿ ತೆರವುಗೊಳಿಸಬೇಕು. ಹೀಗಾದಾಗ ಮಾತ್ರ ಕೊನೆಯ ಭಾಗದ ರೈತರಿಗೆ ನೀರು ಸಿಗಲು ಸಾಧ್ಯ. ಚರಂಡಿ ನೀರು ಕಾಲುವೆಗಳಲ್ಲಿ ಸೇರದಂತೆ ಕ್ರಮ ಜರುಗಿಸಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.