ಹರಪನಹಳ್ಳಿ: ತಾಲ್ಲೂಕಿನ ಅರಸೀಕೆರೆ ಕೋಲಶಾಂತೇಶ್ವರ ಮಠದಲ್ಲಿ ಬಸವ ಜಯಂತಿ ಪ್ರಯುಕ್ತ ಬುಧವಾರ ಜರುಗಿದ 41ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 34 ಜೋಡಿ ದಾಂಪತ್ಯಕ್ಕೆ ಅಡಿಯಿಟ್ಟರು.
ಸಾನ್ನಿಧ್ಯ ವಹಿಸಿದ್ದ ಶಾಂತಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಗ್ರಾಮದ ಎಲ್ಲ ವರ್ಗಗಳ ಭಕ್ತರ ಸಹಕಾರದಿಂದ 41 ವರ್ಷಗಳಿಂದ ಸಾಮೂಹಿಕ ವಿವಾಹ ಯಶಸ್ವಿಯಾಗಿದೆ. ಇದರಿಂದ ನಿರ್ಗತಿಕರು, ಬಡವರಿಗೆ ಹೆಚ್ಚು ಅನುಕೂಲವಾಗಿದೆ. ದುಂದುವೆಚ್ಚ ಆಗದಂತೆ ನಮ್ಮ ಮಠವು ಈವರೆಗೆ 3,046 ಜೋಡಿಗಳ ಮದುವೆಗೆ ಸಹಕಾರಿ ಆಗಿದೆ’ ಎಂದರು.
ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ‘ಗಂಡ ಹೆಂಡತಿ ಪ್ರೀತಿ, ನಂಬಿಕೆ, ವಿಶ್ವಾಸದಿಂದ ಜೀವನ ನಡೆಸಬೇಕು. ಪರಸ್ಪರರು ಆತ್ಮ ಗೌರವ ಹೊಂದಿದ್ದರೆ ಸಂಸಾರವು ಸುಗಮವಾಗಿ ಸಾಗುತ್ತದೆ’ ಎಂದು ಸಲಹೆ ನೀಡಿದರು.
ಡಾ.ಎಸ್.ಎನ್. ಮಹೇಶ್ ಮತ್ತು ಕೆ.ನಾಗರತ್ನಮ್ಮ ಅವರಿಗೆ ‘ಬಸವ ಗುರುಕಿರಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮೀಜಿ, ಬಾಚಿಗೊಂಡನಹಳ್ಳಿ ತೋಂಟದಾರ್ಯ ಮಠದ ಶಿವಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ವೈ.ಡಿ. ಅಣ್ಣಪ್ಪ, ಪ್ರಶಾಂತ್ ಪಾಟೀಲ್, ನಿವೃತ್ತ ಶಿಕ್ಷಕಿ ಲಲಿತಮ್ಮ, ಶಿವಕುಮಾರ ಸ್ವಾಮೀಜಿ, ಕೊಟ್ರಯ್ಯ, ಬಸಾಪುರ ಮಂಜುನಾಥ, ಸಲಾಂ ಸಾಹೇಬ್, ಕೆ.ಮಹಾಂತೇಶ್, ಬಸವರಾಜ್ ಇದ್ದರು.
ಕಣಿವಿಹಳ್ಳಿಯಲ್ಲಿ 6 ಜೋಡಿ ವಿವಾಹ: ತಾಲ್ಲೂಕಿನ ಕಣಿವಿಹಳ್ಳಿ ಗ್ರಾಮದಲ್ಲಿ ಸ್ನೇಹ ಜೀವಿ ಸಮಾಜಮುಖಿ ಟ್ರಸ್ಟ್ ವತಿಯಿಂದ ನಡೆದ ಸಾಮೂಹಿಕ ವಿವಾಹದಲ್ಲಿ 6 ಜೋಡಿಗಳ ಮದುವೆ ನೆರವೇರಿತು. ನಂದಿಪುರ ಮಠದ ಮಹೇಶ್ವರ ಸ್ವಾಮೀಜಿ, ಮಾಜಿ ಶಾಸಕ ಜಿ.ಕರುಣಾಕರ ರೆಡ್ಡಿ, ವಕೀಲ ಕಣಿವಿಹಳ್ಳಿ ಮಂಜುನಾಥ, ಬಿಜೆಪಿ ಮುಖಂಡ ಕಣಿವಿಹಳ್ಳಿ ಮಂಜುನಾಥ, ಟ್ರಸ್ಟ್ ಅಧ್ಯಕ್ಷ ಗೋಣಿಸ್ವಾಮಿ, ಉಪಾಧ್ಯಕ್ಷ ಪ್ರಸಾದ್, ಕಾರ್ಯದರ್ಶಿ ವಸಂತ, ರಾಜು, ಹೊನ್ನಪ್ಪ, ಹುಚ್ಚಪ್ಪ, ಪವನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.