ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಯುವಕನೊಬ್ಬ ಸೆಲ್ಫಿ ವಿಡಿಯೊ ಚಿತ್ರೀಕರಿಸಿ ಕ್ರಿಮಿನಾಶಕ ಸೇವಿಸಿ ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮ್ಯಾಗಳಮನಿ ಪ್ರವೀಣ್ (30) ಆತ್ಮಹತ್ಯೆ ಮಾಡಿಕೊಂಡ ಯುವಕ. ‘ಕುಟುಂಬದ ಆಸ್ತಿ ಹಂಚಿಕೆಯ ವಿಷಯದಲ್ಲಿ ಹಸ್ತಕ್ಷೇಪ ಮಾಡಿರುವ ಗ್ರಾಮದ ಮುಖಂಡರಾದ ಅಕ್ಕಿ ತೋಟೇಶ್, ಬಾಚಿನಹಳ್ಳಿ ಆನಂದ ಮತ್ತು ತಂಬ್ರಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಮಾರುತಿ ಅವರು ಕಿರುಕುಳ ನೀಡಿದ್ದಾರೆ ಎಂದು ಕ್ರಿಮಿನಾಶಕ ಬಾಟಲಿ ಕೈಯಲ್ಲಿ ಹಿಡಿದುಕೊಂಡು’ ಪ್ರವೀಣ್ ವಿಡಿಯೊ ಮಾಡಿದ್ದಾರೆ. ವಿಡಿಯೊದಲ್ಲಿ ಮೂವರ ವಿರುದ್ಧ ಅಶ್ಲೀಲ ಮಾತುಗಳನ್ನು ಆಡಿದ್ದಾರೆ.
ಈ ಕುರಿತು ಮುಖಂಡ ಅಕ್ಕಿ ತೋಟೇಶ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಪ್ರವೀಣ್ ಮತ್ತು ಆತನ ಸಹೋದರನ ನಡುವ ಕೌಟಂಬಿಕ ಕಲಹ ಇತ್ತು. ಈ ಬಗ್ಗೆ ಅಕ್ಟೋಬರ್ 28ರಂದು ಪರಸ್ಪರ ರಾಜಿ ಮಾಡಿಸಲಾಗಿತ್ತು. ಈ ಹಿಂದೆಯೂ ಗ್ರಾಮದಲ್ಲಿ ಇಂತಹ ಸಣ್ಣಪುಟ್ಟ ಗಲಾಟೆಗಳು ನಡೆದಾಗ ಪಂಚಾಯ್ತಿ ಮೂಲಕ ರಾಜಿ ಮಾಡಿಸಲಾಗಿದೆ. ಪ್ರವೀಣ್ ವಿಡಿಯೊದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರ ಕುರಿತು ತಂಬ್ರಹಳ್ಳಿ ಠಾಣೆಗೆ ದೂರು ನೀಡಿರುವೆ’ ಎಂದು ತಿಳಿಸಿದ್ದಾರೆ.
ಸರ್ಕಲ್ ಇನ್ಸ್ಪೆಕ್ಟರ್ ಟಿ.ಮಂಜಣ್ಣ ಮಾತನಾಡಿ, ‘ಇದುವರೆಗೆ ಪ್ರಕರಣ ದಾಖಲಾಗಿಲ್ಲ. ದೂರು ನೀಡಿದಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುವುದು’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.