ADVERTISEMENT

ಕ್ಷುಲ್ಲಕ ಕಾರಣಕ್ಕೆ ಬಾರ್‌ನಲ್ಲಿ ಜಗಳ: ಯುವಕನಿಗೆ ಚಾಕುವಿನಿಂದ ಇರಿದು ಕೊಲೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 16:01 IST
Last Updated 29 ಮಾರ್ಚ್ 2022, 16:01 IST
ಗಂಗಾಧರ್‌
ಗಂಗಾಧರ್‌   

ಹೊಸಪೇಟೆ (ವಿಜಯನಗರ): ನಗರದ ಬಳ್ಳಾರಿ ರಸ್ತೆಯ ಬಾರ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ತಕರಾರು, ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ.

ತಾಲ್ಲೂಕಿನ ಧರ್ಮಸಾಗರದ ಗಂಗಾಧರ್ (34) ಮೃತ ವ್ಯಕ್ತಿ. ‘ಮಂಗಳವಾರ ಸಂಜೆ 5.30ರಿಂದ 6ಗಂಟೆಯ ನಡುವೆ ಬಳ್ಳಾರಿ ರಸ್ತೆಯ ಯಶ್‌ ಬಾರ್‌ನಲ್ಲಿ ಗಂಗಾಧರ್ ಇನ್ನಿಬ್ಬರೊಂದಿಗೆ ಮದ್ಯ ಸೇವಿಸುತ್ತ, ಊಟ ಮಾಡುತ್ತ ಕುಳಿತಿದ್ದರು. ಈ ವೇಳೆ ಅವರೊಂದಿಗೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಇಬ್ಬರ ಪೈಕಿ ಒಬ್ಬ ವ್ಯಕ್ತಿ ಚಾಕುವಿನಿಂದ ಗಂಗಾಧರ್ ಎಡಭಾಗದಲ್ಲಿ ಎದೆಗೆ ಇರಿದಿದ್ದಾರೆ. ತೀವ್ರ ರಕ್ತಸ್ರಾವವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಂಗಾಧರ್‌ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ತಿಳಿಸಿದ್ದಾರೆ.

‘ಗಂಗಾಧರ್‌ ಗೋವಾದ ಕ್ಯಾಸಿನೊದಲ್ಲಿ ಕೆಲಸ ಮಾಡುತ್ತಿದ್ದರು. ಆಗಾಗ ಊರಿಗೆ ಬಂದು ಹೋಗುತ್ತಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಬಂದಿದ್ದರು. ಮಂಗಳವಾರ ಬಾರ್‌ನಲ್ಲಿದ್ದಾಗ ಈ ಘಟನೆ ಜರುಗಿದೆ. ಗಂಗಾಧರ್‌ ಸಂಬಂಧಿಕರು ನೀಡಿರುವ ದೂರಿನ ಮೇರೆಗೆ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಯಾರು, ಘಟನೆಗೆ ನಿಖರವಾದ ಕಾರಣವೇನು ಎನ್ನುವುದು ತನಿಖೆಯ ಬಳಿಕ ಗೊತ್ತಾಗಲಿದೆ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.