ಚಡಚಣ: ಸಾಮಾನ್ಯವಾಗಿ ಭಾರ ಎಳೆಯುವದರಲ್ಲಿ ಆನೆಗಳು ನಿಸ್ಸೀಮ. ಯಂತ್ರಗಳು ಎತ್ತುವದು, ಎಳೆಯವದರಲ್ಲಿ ಸಾಮಾನ್ಯ. ಆದರೆ, ಜೋಡೆತ್ತುಗಳು ಒಂದು ಟ್ರೈಲರ್ನಷ್ಟು ಕಬ್ಬು ಎಳೆಯುವುದು ಸಾಮಾನ್ಯವಲ್ಲದ ಮಾತು.ಆದರೂ ಇದು ಅಚ್ಚರಿ ಎಂಬಂತೆ, ಅಭಿಮನ್ಯು ಚವರೆ ಅವರ ಜೋಡು ಎತ್ತುಗಳು 9 ಟನ್ ಕಬ್ಬು ತುಂಬಿದ ಚಕ್ಕಡಿ ಎಳೆದು ನೋಡುಗರಿಂದ ಸೈ ಎನಿಸಿಕೊಂಡವು.
ಇಲ್ಲಿಗೆ ಸಮೀಪದ ಇಂಡಿಯನ್ ಶುಗರ್ ಕಾರ್ಖಾನೆಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಅತಿ ಹೆಚ್ಚು ಕಬ್ಬು ತುಂಬಿ, ಚಕ್ಕಡಿ ಎಳೆಯವ ಸ್ಪರ್ಧೆ ಜರುಗಿತು. ಈ ಸ್ಪರ್ಧೆಯಲ್ಲಿ ಹತ್ತಾರು ಚಕ್ಕಡಿಗಳು, ದೈತ್ಯ ಎತ್ತುಗಳು ಪಾಲ್ಗೊಂಡು ಸಾಹಸ ಮೆರದವು.
ಇವುಗಳಲ್ಲಿ ಕಬ್ಬು ಕಟಾವಿಗೆಂದು ಇಲ್ಲಿ ಠಿಕಾಣಿ ಹೂಡಿದ ಮಹಾರಾಷ್ಟ್ರದ ಬೀಡ ಜಿಲ್ಲೆಯ ಜೀವಚವಾಡಿ ಗ್ರಾಮದ ಅಭಿಮನ್ಯು ಮುರಳಿ ಚವರೆ ಅವರ ಎರಡು ಎತ್ತುಗಳು ಸುಮಾರು 9 ಟನ್ ಕಬ್ಬು ತುಂಬಿದ ಚಕ್ಕಡಿಯನ್ನು ಸುಮಾರು ಒಂದೂವರೆ ಕಿಲೋಮೀಟರ್ ಯಾವುದೇ ಆಯಾಸವಿಲ್ಲದೆ, ಕ್ರಮಿಸುವದರ ಮೂಲಕ ತಮ್ಮ ಅಗಾಧ ಶಕ್ತಿಯನ್ನು ಪ್ರದರ್ಶಿಸಿದವು.
ಇವರ ಹಿಂದೆ ಕ್ರಮಿಸಿದ ಮಹಾರಾಷ್ಟ್ರದ ಭೀಡ್ ಜಿಲ್ಲೆಯ ಟಾಕಳಿ ಗ್ರಾಮದ ಗಣೇಶ ನ್ಯಾನೋಬಾ ಮೋಡೆ ಎಂಬುವವರ ಎತ್ತುಗಳೂ ಸಾಮಾನ್ಯದವಲ್ಲ. ಅವೂ ಸುಮಾರು 6 ಟನ್ ಕಬ್ಬು ತುಂಬಿದ ಚಕ್ಕಡಿ ಎಳೆದು ನೋಡುಗರನ್ನು ನಿಬ್ಬೆರಗು ಗೊಳಿಸಿದವು.
ಸಾಮಾನ್ಯವಾಗಿ 3 ರಿಂದ 4 ಟನ್ ಕಬ್ಬು ತುಂಬಿದ ಚಕ್ಕಡಿಗಳನ್ನು ಜೋಡೆತ್ತುಗಳು ಎಳೆಯಬಲ್ಲವು. ಅದರಂತೆ ಟ್ರ್ಯಾಕ್ಟರ್ಗಳು, ಒಂದು ಟ್ರೈಲರನಲ್ಲಿ ಸುಮಾರು 15 ರಿಂದ 18 ಟನ್ ಕಬ್ಬು ಎಳೆಯುವ ಸಾಮರ್ಥ್ಯ ಹೊಂದಿರುತ್ತವೆ.ಈ ಸಾಧನೆ ಮಾಡಿದ ಇಬ್ಬರಿಗೂ ಕಾರ್ಖಾನೆಯ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ರೈತರು ಬಹುಮಾನ ನೀಡಿ, ಕೊಂಡಾಡಿದರು.
ಅಲ್ಲಮಪ್ರಭು ಕರ್ಜಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.