ADVERTISEMENT

ಕರ್ತವ್ಯ ಲೋಪ: ಶಿಕ್ಷಕ ಕಾಂಬಳೆ ಅಮಾನತು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 5:10 IST
Last Updated 10 ಫೆಬ್ರುವರಿ 2012, 5:10 IST

ಸಿಂದಗಿ: ತಾಲ್ಲೂಕಿನ ಗೋಲಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಎಂ.ಎಸ್. ಕಾಂಬಳೆ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಶಾಲಾ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಿ ಉಳಿದಿರುವುದು, ಶಾಲಾ ಮಕ್ಕಳ ದಾಖಲಾತಿಗಿಂತ ಹಾಜರಾತಿ ಕಡಿಮೆ ಇರುವುದು, ಶಿಕ್ಷಕರ ಹಾಜರಿ ಪುಸ್ತಕ ಮತ್ತು ಇತರೇ ಮಾಹಿತಿಗಳನ್ನು ಸರಿಯಾಗಿ ಇಡದೇ ಇರುವುದು.

ನಲಿ-ಕಲಿ ತರಗತಿಯನ್ನು ನಿಯಮಾನುಸಾರ ಮಾಡದೇ ಇರುವುದು, ಮುಖ್ಯ ಅಡುಗೆಯವರು, ಸಹಾಯಕರು ಮಕ್ಕಳಿಗೆ ಬಿಸಿ ಊಟ ತಯ್ಯಾರಿಸಲು ಬಂದರೂ ಸಹ ಕಾರ್ಯಾಲಯಕ್ಕೆ ಬೀಗ ಹಾಕುವುದು.

ಅಲ್ಲದೇ ಮಕ್ಕಳು ಕಲಿಕೆಯಲ್ಲಿ ತುಂಬಾ ಹಿಂದುಳಿದಿದ್ದು ಶಾಲೆಯ ಶೈಕ್ಷಣಿಕ ದೃಷ್ಟಿಯಿಂದಲೂ ಹಾಗೂ ಆಡಳಿತಾತ್ಮಕ ಹಿತ ದೃಷ್ಟಿಯಿಂದಲೂ ನಿರ್ಲಕ್ಷ್ಯ ತೋರಿದ್ದಾರೆ ಎಂದು ಅಮಾನತು ಆದೇಶದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್. ಬಿರಾದಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.