ADVERTISEMENT

ಕೃಷ್ಣಾ ಮೇಲ್ದಂಡೆ; ಹದಗೆಟ್ಟ ಕಾಲುವೆ :ಶೀಘ್ರ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಮೇ 2012, 8:45 IST
Last Updated 4 ಮೇ 2012, 8:45 IST

ಆಲಮಟ್ಟಿ: ಆಲಮಟ್ಟಿ ಎಡದಂಡೆ ಕಾಲುವೆ ದುರಸ್ತಿಗೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.ಈ ಕಾಲುವೆಯ ಬಹುತೇಕ ಕಡೆ ತೆಗ್ಗುಗಳು ನಿರ್ಮಾಣವಾಗಿವೆ. ಮುಖ್ಯ ಸ್ಥಾವರದ ಘಟಕದಿಂದ ಕಾಲುವೆಗೆ ನೀರು ಹರಿಸುವ ಸ್ಥಳದಲ್ಲಿಯಂತೂ ಕಾಲುವೆಯ ತಡೆಗೋಡೆ ಸಂಪೂರ್ಣ ಕುಸಿದಿದೆ. ಇನ್ನೂ ಅನೇಕ ಕಡೆ  ಹೂಳು ತುಂಬಿದೆ.

ನೀರಿನ ಕೊರತೆಯ ಹಿನ್ನೆಲೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಎಡದಂಡೆ ಕಾಲುವೆ, ಆಲಮಟ್ಟಿ ಬಲದಂಡೆ ಕಾಲುವೆ, ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆ ಸೇರಿದಂತೆ ಎ್ಲ್ಲಲ ಕಾಲುವೆಗಳಲ್ಲಿ ಈಗ ನೀರು ಹರಿಯುತ್ತಿಲ್ಲ. ಹೀಗಾಗಿ ದುರಸ್ತಿ ಮಾಡಲು ಮತ್ತು ಹೂಳೆತ್ತಲು ಒಳ್ಳೆಯ ಅವಕಾಶವಿದೆ.

ಈ ಕಾಲುವೆಗಳಿಂದ ಸುಮಾರು 30 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆದರೆ ಕಾಲುವೆಗಳ ನಿರ್ವಹಣೆ ಸಮರ್ಪಕವಾಗಿ ಮಾಡದೇ ಇರುವುದರಿಂದ ಕಾಲುವೆಗಳು ಒಡೆದುಹೋಗಿವೆ.
ಪ್ರತಿ ವರ್ಷ ಮಾರ್ಚ್, ಏಪ್ರಿಲ್, ಮೇ, ಜೂನ್ ಸೇರಿದಂತೆ ಒಟ್ಟಾರೆ ಮೂರರಿಂದ ನಾಲ್ಕು ತಿಂಗಳು ಕಾಲ ಕಾಲುವೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗುತ್ತದೆ. ಈ ಅವಧಿಯಲ್ಲಿಯೇ ದುರಸ್ತಿ ಮಾಡಬೇಕಾಗುತ್ತದೆ. ನಂತರ ಜುಲೈನಲ್ಲಿ ನೀರು ಹರಿಸಲಾಗುತ್ತದೆ.

ಈ ಬಾರಿ ಮಾರ್ಚ್ 15ರ ಹೊತ್ತಿಗೆ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದ್ದು, ಇದರಿಂದ ದುರಸ್ತಿಗೆ ಸಾಕಷ್ಟು ಕಾಲಾವಧಿ ಲಭ್ಯವಿದೆ.ಒಂದು ವೇಳೆ ದುರಸ್ತಿ ಮಾಡಲಾರದೇ ಹಾಗೇಯೇ ನೀರು ಬಿಟ್ಟರೆ ಕಾಲುವೆ ಒಡೆಯುವ, ಸೋರಿ ಹೋಗುವ, ಭೂಮಿ ಜವುಳು ಹಿಡಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.