ADVERTISEMENT

ಗುಣಾತ್ಮಕ ಶಿಕ್ಷಣದ ಕೊರತೆ: ಗಣಿಹಾರ ವಿಷಾದ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 5:45 IST
Last Updated 21 ಸೆಪ್ಟೆಂಬರ್ 2011, 5:45 IST

ಸಿಂದಗಿ: ಉರ್ದು ಪ್ರಾಥಮಿಕ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣದ ಕೊರತೆ ಎದ್ದು ಕಾಣುತ್ತಲಿದ್ದು, ಯಾವತ್ತೂ ಶಿಕ್ಷಕ ಬಂಧುಗಳು ಉರ್ದು ಭಾಷೆಯ ಬೆಳವಣಿಗೆ ಜತೆಗೆ ಗುಣಾತ್ಮಕ ಶಿಕ್ಷಣ ನೀಡಿ ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ ಮಾಡಬೇಕು ಎಂದು ಅಂಜುಮನ್- ಎ-ಇಸ್ಲಾಂ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಪಾಟೀಲ ಗಣಿಹಾರ ಹೇಳಿದರು.

ಸ್ಥಳೀಯ ಬಂದಾಳ ಕ್ರಾಸ್ ಬಳಿ ಇರುವ ಮದರಸಾ ಬೈತೂಲ್ ಉಲೂಮ್‌ದಲ್ಲಿ ಶಿಕ್ಷಣ ಇಲಾಖೆ ಮತ್ತು ಅಂಜುಮನ್-ಎ-ಇಸ್ಲಾಂ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ಉರ್ದು ಪ್ರಾಥಮಿಕ ಶಾಲೆಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಉರ್ದು ಸಾಹಿತ್ಯ ಅಕಾಡೆಮಿ ಸದಸ್ಯ ರಫೀ ಭಂಡಾರಿ ಮುಖ್ಯ ಅತಿಥಿಗಳಾಗಿ ಉರ್ದು ಭಾಷೆ ಅಂತರರಾಷ್ಟ್ರೀಯ ಭಾಷೆಯಾಗಿದ್ದು, ಇದರ ಅಳಿವು-ಉಳಿವು ಶಿಕ್ಷಕರ ಮೇಲೆ ನಿಂತಿದೆ. ಯಾವುದೇ ಕಾರ್ಯ ಯಶಸ್ಸಿಗೆ ಆತ್ಮವಿಶ್ವಾಸ ಮುಖ್ಯ. ಸಂಬಳಕ್ಕಾಗಿ ದುಡಿಯದೇ ಆತ್ಮ ಸಾಕ್ಷಿಯಾಗಿ ಶ್ರಮಿಸಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಎಸ್.ಬಿರಾದಾರ ಮಾತನಾಡಿ, ಶಿಕ್ಷಣದ ಪ್ರಗತಿಗಾಗಿ ಸರ್ವ ಸೌಲಭ್ಯಗಳಿದ್ದರೂ ಉರ್ದು ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ದೊರಕುತ್ತಿಲ್ಲ. ಇದಕ್ಕೆ ಶಿಕ್ಷಕರೇ ಹೊಣೆಗಾರರು. ತಾಲ್ಲೂಕಿನ 75 ಉರ್ದು ಪ್ರಾಥಮಿಕ ಶಾಲೆಗಳಲ್ಲಿನ ಮಕ್ಕಳಿಗೆ ಓದು-ಬರಹ ಬರುವಂತಾಗಲಿ ಎಂದರು.

ಮುಕ್ತಾರ್ ಅಹ್ಮದ ಜಮಾದಾರ, ಜೆ.ಎಂ.ಕರ್ಜಗಿ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಅಬ್ದುಲರಜಾಕಸಾಬ ದುಧನಿ, ಹಾಫೀಜ್ ಫಜಲೂಲ್‌ಹಕ್ ಗಿರಗಾಂವ, ಶಿಕ್ಷಕ ಸಂಘದ ಪದಾಧಿಕಾರಿಗಳಾದ ಎಂ.ಎಸ್.ಚೌಧರಿ, ಕೆ.ಆರ್.ಕೊಕಟನೂರ, ಎ.ಜಿ. ಪಟ್ಟೇದ, ಕೆ.ಡಿ.ಮುಲ್ಲಾ, ಅಬ್ದುಲ್ ಹಮೀದ್ ಮಸಳಿ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಶಾಖೆ ಅಧ್ಯಕ್ಷ ಯು.ಐ.ಶೇಖ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉರ್ದು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಎಂ. ಕುಮಸಗಿ ನಿರೂಪಿಸಿದರು. ವೈ.ಆರ್. ಶಿರಸಗಿ ವಂದಿಸಿದರು.

ಕಂಬಾರರಿಗೆ ಅಭಿನಂದನೆ
ಕವಿ, ಖ್ಯಾತ ನಾಟಕಕಾರ  ಡಾ.ಚಂದ್ರಶೇಖರ ಕಂಬಾರ ದೇಶದ ಅತ್ಯುನ್ನತ ಜ್ಞಾನಪೀಠ ಪ್ರಶಸ್ತಿ ಗರಿ ಮುಡಿಗೇರಿಸಿಕೊಂಡಿರುವದಕ್ಕೆ ಟ್ಟಣದಲ್ಲಿ ವಿವಿಧ ಸಂಘಟನೆಗಳ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಸಾರಂಗಮಠದ ಶ್ರೀಗಳಾದ ಪ್ರಭು ಸಾರಂಗದೇವ ಶಿವಾಚಾರ್ಯರು, ಶಾಂತೇಶ್ವರಮಠದ ಶಿವಾನಂದ   ಶಿವಾಚಾರ್ಯರು, ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಗುರುದೇವಶ್ರಾಮದ ಶಾಂತಗಂಗಾಧರ ಸ್ವಾಮೀಜಿ, ಅಂಬಿಕಾತನಯದತ್ತ ವೇದಿಕೆ ಅಧ್ಯಕ್ಷ ಡಾ.ಬಿ.ಆರ್. ನಾಡಗೌಡ, ನೆಲೆ ಪ್ರಕಾಶನದ ಸಂಚಾಲಕರಾದ ಡಾ.ಎಂ.ಎಂ.ಪಡಶೆಟ್ಟಿ, ಡಾ.ಚನ್ನಪ್ಪ ಕಟ್ಟಿ, ವಿದ್ಯಾಚೇತನ ಪ್ರಕಾಶನದ ಹ.ಮ.ಪೂಜಾರ, ಚನ್ನವೀರ ಸ್ವಾಮೀಜಿ ಪ್ರತಿಷ್ಠಾನದ ಸಂಚಾಲಕ ಪ್ರೊ.ವಿ.ಡಿ. ವಸ್ತ್ರದ, ಶಾಸಕ ರಮೇಶ ಭೂಸನೂರ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಪುರಸಭೆ ಅಧ್ಯಕ್ಷ ಸುಶಾಂತ ಪೂಜಾರಿ, ಸದಸ್ಯ ರಾಜಶೇಖರ ಕೂಚಬಾಳ, ಎಂ.ಎನ್. ಕಿರಣರಾಜ್, ದಲಿತ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ವಿರೂಪಾಕ್ಷಿ ಗುಬ್ಬೇವಾಡ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಸವಲಿಂಗ ಬೂದಿಹಾಳ, ಅಖಿಲ ಭಾರತ ವೀರಶೈವ ಮಹಾಸಭೆ ತಾಲ್ಲೂಕು ಸಮಿತಿ ಅಧ್ಯಕ್ಷ ಅಶೋಕ ವಾರದ, ಉಪಾಧ್ಯಕ್ಷ ಅಶೋಕ ಮನಗೂಳಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕಾಲೇಜುಗಳ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಪ್ರೊ.ರವಿ ಗೋಲಾ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.