ADVERTISEMENT

ಗೋಟಖಂಡ್ಕಿಯಲ್ಲಿ ನಿಯಂತ್ರಣಕ್ಕೆ ಬಂದ ವಾಂತಿ ಭೇದಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 5:21 IST
Last Updated 18 ಜುಲೈ 2013, 5:21 IST

ತಾಳಿಕೋಟೆ: ಸಮೀಪದ ಗೋಟಖಂಡ್ಕಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದ ಪರಿಣಾಮ ಕಳೆದ ಮೂರು ದಿನಗಳಿಂದ ಆತಂಕಕ್ಕೆ ಕಾರಣವಾಗಿದ್ದ  ವಾಂತಿ-ಭೇದಿ ಪ್ರಕರಣ ಬುಧವಾರ ನಿಯಂತ್ರಣಕ್ಕೆ ಬಂದಿದೆ.

ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ 6 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಈ ನಡುವೆ 75 ವರ್ಷ ವಯಸ್ಸಿನ ವೃದ್ಧೆ ವಾಂತಿ ಭೇದಿಯಿಂದ ಮೃತಪಟ್ಟಿದ್ದಾರೆ.

ಭಂಟನೂರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂಕಣ್ಣನವರ ನೇತೃತ್ವದಲ್ಲಿ ತಾತ್ಕಾಲಿಕ ಎಎನ್‌ಎಂ ಕೇಂದ್ರ ಸ್ಥಾಪಿಸಿದ್ದು, ಸಿಬ್ಬಂದಿ  ಗ್ರಾಮದಯೇ ಬೀಡು ಬಿಟ್ಟಿದ್ದಾರೆ.

ಗೋಟಖಿಂಡ್ಕಿ ಗ್ರಾಮ ಅನೇಕ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿತ್ತು. ಕಳೆದೆರಡು ವರ್ಷಗಳಿಂದ ಮಳೆಯಾಗದೇ ಕುಡಿಯುವ ನೀರಿಗೆ ಇನ್ನಷ್ಟು ಸಂಕಟ ತಂದಿತ್ತು. ಈ ಹಿನ್ನೆಲೆಯಲ್ಲಿ  ಗ್ರಾ.ಪಂ.ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿತ್ತು. ಇದಲ್ಲದೇ ಗ್ರಾಮದ ನಿವಾಸಿ ತಾ.ಪಂ.ಸದಸ್ಯೆ ಕಸ್ತೂರಿಬಾಯಿ ಬಂಟನೂರ ಹಾಗೂ ರಾಮನಗೌಡ ಎಂಬವರು ತಮ್ಮ ಸ್ವಂತ ಭಾವಿಯಿಂದ ಕುಡಿಯುವ ನೀರನ್ನು ಪಟ್ಟಣಕ್ಕೆ ಒದಗಿಸುವ ಮೂಲಕ ನೀರಿನ ಬವಣೆಗೆ ತಕ್ಕ ಉಪಶಮನ  ಮಾಡಿದ್ದರು.

`ವಾಂತಿ-ಬೇಧಿ ಕಾರಣದಿಂದ ಗ್ರಾಮದ ಜನತೆ ಬಳಸುತ್ತಿದ್ದ ಎಲ್ಲ ಕುಡಿಯುವ ನೀರಿನ ಮೂಲಗಳಿಂದ ನೀರನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ವರದಿ ಆದರಿಸಿ  ಕ್ರಮ ಕೈಕೊಳ್ಳಲಾಗುವುದು' ಎಂದು ಪಿಡಿಒ ಸಿ.ಎಸ್. ಮಠ ತಿಳಿಸಿದ್ದಾರೆ.

ತಾ.ಪಂ.ಇ.ಒ ಭೇಟಿ: ಸೋಮವಾರ  ಗ್ರಾಮ ದಲ್ಲಿ ವಾಂತಿ-ಬೇಧಿಯಿಂದ ಮೃತಪಟ್ಟಮಹಿಳೆ ಸೋಮವ್ವ ಭೀಮರಾಯ ಚೌದ್ರಿ(75)ಅವರ ಮನೆಗೆ ಬುಧವಾರ ಜಿ.ಪಂ. ಸದಸ್ಯ ಸಾಯಬಣ್ಣ ಆಲ್ಯಾಳ, ತಾಪಂ ಇಒ ಅಕ್ಕಮಹಾದೇವಿ ಹೊಕ್ರಾಣಿ, ಹಾಗೂ ಪ್ರಭಾರಿ ತಹಶೀಲ್ದಾರ್ ವೈ.ಎಚ್. ನಾರಾಯಣಕರ ಭೇಟಿ ನೀಡಿ ಸಾಂತ್ವನ ಹೇಳಿದರು.  ಪಿಡಿಒ ಸಿ.ಎಸ್. ಮಠ, ಕಾರ್ಯದರ್ಶಿ ಆರ್.ಬಿ.ಕಿರೇದಳ್ಳಿ,  ಎಂ.ಬಿ. ಅಕ್ಕಿ,  ನಾಶಿ, ಶರಣಗೌಡ ಬಿರಾದಾರ, ರಾಮನಗೌಡ ಬಿರಾದಾರ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.