ಮುದ್ದೇಬಿಹಾಳ: ರಾಜ್ಯದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಯಡಿಯೂರಪ್ಪ ಅವರು ಈ ಸಲ ಮಂಡಿಸಿದ ಬಜೆಟ್ನಲ್ಲಿ ಬಂಗಾರ ಹಾಗೂ ಬಂಗಾರದ ಆಭರಣಗಳ ಮೇಲಿನ ತೆರಿಗೆಯನ್ನು ಶೇ 1ರ ಬದಲಿಗೆ ಶೇ 2ಕ್ಕೆ ಹೆಚ್ಚಿಸಿರುವುದನ್ನು ವಿರೋಧಿಸಿ ತಾಲ್ಲೂಕಿನ ಸರಾಫ್ ವರ್ತಕರು ಹಾಗೂ ಸುವರ್ಣಕಾರರು ತಮ್ಮ ವ್ಯಾಪಾರ ವಹಿವಾಟನ್ನು ಶುಕ್ರವಾರ ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಈ ಸಂಬಂಧ ನಿಯೋಗದಲ್ಲಿ ತೆರಳಿದ ನೂರಾರು ವ್ಯಾಪಾರಸ್ಥರು ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಸಲ್ಲಿಸಿದರು. ಮನವಿಯಲ್ಲಿ ಇಂದಿನ ದಿನಮಾನಗಳಲ್ಲಿ ಬಂಗಾರದ ಬೆಲೆ ಗಗನಕ್ಕೇರುತ್ತಿದ್ದು, ಬಂಗಾರ ಖರೀದಿಸಲು ಜನತೆ ಹಿಂದೆ ಮುಂದೆ ನೋಡುವ ಕಾಲ ಬಂದಿದೆ. ಇಂಥ ವೇಳೆಯಲ್ಲಿ ಬಂಗಾರದ ಮೇಲಿನ ತೆರಿಗೆ ಹೆಚ್ಚಿಸುವದರಿಂದ ಖರೀದಿದಾರರ ಮೇಲೆ ಹೆಚ್ಚಿನ ಹೊರೆ ಹೊರಿಸಿದಂತಾಗುತ್ತದೆ. ಇದರಿಂದ ಸರಾಫ್ ವರ್ತಕರಿಗೆ ಹಾಗೂ ಅದನ್ನೇ ನಂಬಿ ಬದುಕುವ ಸುವರ್ಣಕಾರರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಈ ಮೊದಲಿನಂತೆ ತೆರಿಗೆಯನ್ನು ಶೇ. 1ರಷ್ಟು ಮುಂದುವರಿಸುವಂತೆ ಮನವಿಯಲ್ಲಿ ಕೋರಲಾಗಿದೆ.
ನಿಯೋಗದಲ್ಲಿ ಸಂಘದ ಅಧ್ಯಕ್ಷರಾದ ತಿಲೋಕಚಂದ ಓಸ್ವಾಲ್, ಕಾರ್ಯದರ್ಶಿ ನಾರಾಯಣ ದೋಟಿಹಾಳ, ತಾಳಿಕೋಟಿ ಸಂಘದ ಅಧ್ಯಕ್ಷ ದೇವಿಚಂದ ಗಿನ್ನಾಜಿ ಓಸ್ವಾಲ್, ಮೋಹನ ಬೋರಮಲ್ಲ ಓಸ್ವಾಲ್, ಮೋಹನ ಗಿನ್ನಾಜಿ ಓಸ್ವಾಲ್, ಸುನೀಲ ಇಲ್ಲೂರ, ಎಸ್.ಐ. ನಾಗಠಾಣ, ಮುತ್ತಣ್ಣ ಗೂಳಿ, ಕೆ.ಡಿ. ಓಸ್ವಾಲ್, ನೀಲೇಶ ಓಸ್ವಾಲ, ದೀಪೂ ಓಸ್ವಾಲ್, ಎಸ್.ಡಿ. ಜೈನ, ಎನ್.ಎಚ್. ಜೈನ, ವಿಜು ಬಡಿಗೇರ. ಮೌನೇಶ ಹಡಲಗೇರಿ, ವಿರೂಪಾಕ್ಷಿ ಪತ್ತಾರ, ಮೌನೇಶ ಎಚ್.ಪತ್ತಾರ, ಅಶೋಕ ಪತ್ತಾರ, ಪ್ರಕಾಶ ಪತ್ತಾರ ಸೇರಿದಂತೆ ನೂರಾರು ಸರಾಫ್ ಹಾಗೂ ಸುವರ್ಣಕಾರರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.