ವಿಜಯಪುರ: ‘ಜಿಲ್ಲೆಯ ಮಹತ್ವಾಕಾಂಕ್ಷಿಯ ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿಯ ಕಾಲುವೆ ಜಾಲಕ್ಕೆ ಶುಕ್ರವಾರ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಪ್ರಾಯೋಗಿಕವಾಗಿ ನೀರು ಹರಿಸಲು ಚಾಲನೆ ನೀಡಿದ್ದಾರೆ’ ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದರು.
‘2.15 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಈ ಯೋಜನೆಯ ಕಾಲುವೆ ಜಾಲ ನಮ್ಮ ಸರ್ಕಾರದ ಅವಧಿಯಲ್ಲೇ ಹೆಚ್ಚಿನ ಪ್ರಮಾಣದಲ್ಲಿ ನಿರ್ಮಾಣಗೊಂಡಿತ್ತು. ಶುಕ್ರವಾರ ಮಧ್ಯಾಹ್ನ ಯೋಜನೆಯ ಪಂಪ್ಗಳನ್ನು ಚಾಲು ಮಾಡಿದ್ದು, ಸಂಜೆ ವೇಳೆಗೆ ನೀರು ಕಾಲುವೆ ಜಾಲದಲ್ಲಿ ಹರಿದಿದೆ’ ಎಂದು ಅವರು ಹೇಳಿದರು.
‘ಬಸವನಬಾಗೇವಾಡಿ 220 ಕೆ.ವಿ. ಸ್ಟೇಷನ್ನಿಂದ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಸ್ಥಳೀಯ ಜಮೀನು ಮಾಲೀಕರ ಅಸಹಕಾರದಿಂದ ನಿಧಾನ ಗತಿಯಲ್ಲಿ ಸಾಗಿತ್ತು. ಸ್ಥಳಕ್ಕೆ ಭೇಟಿ ನೀಡಿ ಸತತ ಸಭೆ ನಡೆಸಿ, ರೈತರ ಮನವೊಲಿಸಿ ಸಮಸ್ಯೆ ಪರಿಹರಿಸಲಾಗಿತ್ತು.
ಇದೀಗ ಕಾಲುವೆ ಜಾಲದಲ್ಲಿ ನೀರು ಹರಿಯುತ್ತಿದ್ದಂತೆ ಮುದ್ದೇಬಿಹಾಳ ತಾಲ್ಲೂಕಿನ ವಿವಿಧ ಭಾಗದ ಅಸಂಖ್ಯಾತ ರೈತರು ಖುಷಿಯಿಂದ ನವದೆಹಲಿಯಲ್ಲಿರುವ ನನಗೆ ಮೊಬೈಲ್ ಕರೆ ಮಾಡಿ ಧನ್ಯವಾದ ಹೇಳುತ್ತಿದ್ದಾರೆ. ಯುಗಾದಿಗೆ ಬಂಪರ್ ಕೊಡುಗೆ ನೀಡಿದ್ದೀರಿ ಎಂದು ಶ್ಲಾಘಿಸುತ್ತಿದ್ದಾರೆ’ ಎಂದು ಪಾಟೀಲ ದೂರವಾಣಿ ಮೂಲಕ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.