ADVERTISEMENT

ಜೆಡಿಎಸ್‌ಗೆ 300 ಮಂದಿ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 9:00 IST
Last Updated 4 ಅಕ್ಟೋಬರ್ 2017, 9:00 IST

ಸಿಂದಗಿ: ಈ ಭಾಗದ ಪ್ರಬಲ ಗಾಣಿಗ ಸಮುದಾಯದ 300 ಮಂದಿ ಸುಭಾಸಗೌಡ ನಿಂಗನಗೌಡ ಪಾಟೀಲ, ಗೊಲ್ಲಾಳಪ್ಪಗೌಡ ತಮ್ಮನಗೌಡ ಪಾಟೀಲ ಇವರ ನೇತೃತ್ವದಲ್ಲಿ ನಾಗಾಂವಿ ಬಿ.ಕೆ ಗ್ರಾಮದಲ್ಲಿ ಬೃಹತ್ ಮೆರವಣಿಗೆ ಮೂಲಕ ಸಾಮೂಹಿಕವಾಗಿ ಜೆಡಿಎಸ್ ಸೇರ್ಪಡೆಯಾದರು.

ನಾಗಾಂವಿ ಬಿ.ಕೆ ಗ್ರಾಮದಲ್ಲಿ ಹಮ್ಮಿಕೊಂಡ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮವನ್ನು ಮಾಜಿ ಸಚಿವ ಎಂ.ಸಿ.ಮನಗೂಳಿ, ಜೆಡಿಎಸ್ ಧುರೀಣ ಕೇದಾರಲಿಂಗಯ್ಯ ಹಿರೇಮಠ ಉದ್ಘಾಟಿಸಿದರು.

ಕೇದಾರಲಿಂಗಯ್ಯ ಮಾತನಾಡಿ, ‘ಗ್ರಾಮ ವಾಸ್ತವ್ಯ ಮೂಲಕ ರೈತರ ನೋವಿಗೆ ಸ್ಪಂದಿಸಿದ ಏಕಮೇವ ಪಕ್ಷ ಜೆಡಿಎಸ್. ಈ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಹಲವಾರು ಅಭಿವೃದ್ಧಿಪರ ಕಾರ್ಯಗಳನ್ನು ಮಾಡಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವದರ ಜೊತೆಗೆ ಕೃಷಿಗೆ ಪೂರಕವಾದ ಗೊಬ್ಬರ, ಬೀಜ ಹಾಗೂ ಕೃಷಿ ಪರಿಕರಗಳನ್ನು ನೀಡುವ ಯೋಜನೆ ರೂಪಿಸಿದೆ’ ಎಂದರು.

ADVERTISEMENT

‘ರಾಜ್ಯದಲ್ಲಿರುವ ಬಿಜೆಪಿ ನಾಯಕರಿಗೆ ರೈತರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ರೈತರ ಸಾಲ ಮನ್ನಾ ಮಾಡಿಸಲಿ. ಅದನ್ನು ಬಿಟ್ಟು ರೈತರ ಬಗ್ಗೆ ಡೋಂಗಿ ಪ್ರೀತಿ ತೋರಿಸುವುದು ಬೇಡ’ ಎಂದು ಟೀಕಿಸಿದರು.

ಮಾಜಿ ಸಚಿವ ಎಂ.ಸಿ.ಮನಗೂಳಿ ಮಾತನಾಡಿದರು. ಇಂಡಿ ಭಾಗದ ಜೆಡಿಎಸ್ ಧುರೀಣರಾದ ಬಿ.ಡಿ.ಪಾಟೀಲ, ಅಪ್ಪುಗೌಡ ಮನಗೂಳಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಅಶೋಕ ಮನಗೂಳಿ, ಡಾ.ಶಾಂತವೀರ ಮನಗೂಳಿ, ವಿಶ್ವನಾಥಗೌಡ ಪಾಟೀಲ, ನಿಂಗಣ್ಣ ಬಿರಾದಾರ, ಶೈಲಜಾ ಸ್ಥಾವರಮಠ, ಬಸಲಿಂಗಪ್ಪ ಬೋನಾಳ, ಕಲ್ಯಾಣರಾವ ಬಿರಾದಾರ, ಅರವಿಂದ ಹಂಗರಗಿ, ನಾನಾಗೌಡ ಪಾಟೀಲ, ಸಂಗಯ್ಯ ಮಠ, ಉಮೇಶ ಜೋಗೂರ, ಚನ್ನೂ ಪಟ್ಟಣಶೆಟ್ಟಿ, ಅನ್ನಪೂರ್ಣ ಹೊಟಗಾರ, ಜ್ಯೋತಿ ಕಮತಗಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.