ಇಂಡಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಇಂಡಿ ಕಾಲುವೆ ಕಳೆದ 5 ವರ್ಷಗಳಿಂದಲೂ ದುರಸ್ತಿ ಕಾಣದೆ ಸಂಪೂರ್ಣ ಹಾಳಾಗಿದೆ. ಕಾಲುವೆಗೆ ಲೇಪನ ಮಾಡಿರುವ ಸಿಮೆಂಟ್ ಕಾಂಕ್ರಿಟ್ ಬಿಚ್ಚಿಕೊಂಡಿದ್ದು, ಅದರ ಬಿರುಕುಗಳಲ್ಲಿ ದೊಡ್ಡ ದೊಡ್ಡ ಮುಳ್ಳಿನ ಕಂಟಿಗಳು, ಬೆಳೆದಿವೆ. ಹೀಗಾಗಿ ಕಾಲುವೆ ಮೂಲಕ ನೀರು ಬರದೇ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ.
ಕೆಲವು ಕಡೆ ಸಿಮೆಂಟ್ನ ಲೇಪನ ಸಂಪೂರ್ಣ ಕಿತ್ತುಕೊಂಡು ಹೋಗಿ ಕೇವಲ ಮಣ್ಣಿನ ಕಾಲವೆಯಾಗಿ ಪರಿಣಮಿಸಿದೆ. ಕಾಲುವೆಯಲ್ಲಿ ನೀರು ಹರಿಸುವ ಸಂದರ್ಭದಲ್ಲಿ ಕಾಲುವೆಯ ಮಾರ್ಗ ಮಧ್ಯದಲ್ಲಿಯೇ ಸಾಕಷ್ಟು ನೀರು ಪೋಲಾಗಿ ಕಾಲುವೆಯ ಕೊನೆಯವರೆಗೆ ನೀರು ಹರಿಯುತ್ತಿಲ್ಲ.
ಎಂದು ತಾಲ್ಲೂಕಿನ ಹಲಸಂಗಿ, ಗೋಡಿಹಾಳ, ಲೋಣಿ, ಮಣಂಕಲಗಿ, ಉಮರಾಣಿ, ತದ್ದೇವಾಡಿ, ಏಳಗಿ ಮುಂತಾದ ಗ್ರಾಮಗಳ ರೈತರು ದೂರಿದ್ದಾರೆ. ಪ್ರತಿ ವರ್ಷ ಸರಕಾರಕ್ಕೆ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಯ ಉನ್ನತ ಅಧಿಕಾರಿಗಳಿಗೆ ರೈತರು ಮನವಿ ಸಲ್ಲಿಸುತ್ತ ಬಂದಿದ್ದಾರೆ. ಸಾಕಷ್ಟು ಸಲ ಸತ್ಯಾಗ್ರಹ ಮಾಡಿದ್ದಾರೆ. ಕೆಲವು ಸಲ ಕಾಲುವೆಯ ತಡೆಗೋಡೆಗಳನ್ನು ಹಾಳು ಮಾಡಿ ಪ್ರತಿಭಟಿಸಿದ್ದಾರೆ. ಆದರೂ ಸರಕಾರ ಮತ್ತು ಕೃಷ್ಣಾ ಮೇಲ್ದಂಡೆ ಅಧಿಕಾರಿಗಳು ಇತ್ತ ಕಡೆ ಗಮನವೇ ನೀಡಿಲ್ಲ. ಈ ವರ್ಷವೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ನೀರು ಹರಿಸುವುದನ್ನು ನಿಲ್ಲಿಸಿದ ನಂತರ ಕಾಲುವೆ ರಿಪೇರಿ ಮಾಡಬೇಕು. ಆದರೆ ಸಮಯ ಮುಗಿಯುತ್ತ ಬಂದರೂ ಕಾಲುವೆಯ ರಿಪೇರಿ ಮಾಡಿಲ್ಲ.ಈವರ್ಷವೂ ಕಾಲುವೆಗೆ ದುರಸ್ತಿ ಮಾಡದೇ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಕಾಲುವೆಗೆ ನೀರು ಹರಿಬಿಟ್ಟರೆ ಕಾಲುವೆಯ ಕೊನೆಯವರೆಗೂ ನೀರು ಹರಿಯುವುದಿಲ್ಲ.
ಕಾಲುವೆಯ ಕೊನೆಯವರೆಗೆ ನೀರು ಹರಿಯದಿದ್ದರೆ ಸರಕಾರ ಮತ್ತು ಕೃಷ್ಣಾ ಮೇಲ್ದಂಡೆ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ಮಾಡುವು ದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ಮುಂಗಾರು ಮಳೆ ಕೈಕೊಟ್ಟಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಇಂಡಿ ಕಾಲುವೆಗೆ ಯಾವಾಗ ನೀರು ಹರಿಸ ಲಾಗುತ್ತಿದೆ ಎಂದು ರೈತರು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಮಳೆಗಾಲದಲ್ಲಿಯೂ ಈ ಭಾಗದಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯಲೂ ಕೂಡಾ ನೀರಿಲ್ಲದಂತಾಗಿದೆ.
ರೈತರ ಈ ಸಂಕಷ್ಟಗಳನ್ನು ಅರಿತು ಸಂಬಂಧಪಟ್ಟ ಅಧಿಕಾರಿಗಳು ಕೃಷ್ಣಾ ಮೇಲ್ದಂಡೆ ಯೋಜನೆಯ ಇಂಡಿ ಕಾಲುವೆಗೆ ರಿಪೇರಿ ಮಾಡಬೇಕು, ಕಾಲುವೆಯ ಕೊನೆಯವರೆಗೂ ನೀರು ಹರಿಯುವಂತೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿರುವ ರೈತರು, ನೀರು ಹರಿಯದಿದ್ದರೆ ಪ್ರತಿಭಟನೆಗೆ ಮುಂದಾಗುವುದಾಗಿ ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.