ಆಲಮಟ್ಟಿ: ಆಧಾರ ಕೇಂದ್ರದ ನೌಕರರಿಗೆ ಕಳೆದ ಮೂರು ತಿಂಗಳಿಂದ ವೇತನ ನೀಡದೇ ಇರುವುದನ್ನು ಪ್ರತಿಭಟಿಸಿ, ಆಲಮಟ್ಟಿ, ನಿಡಗುಂದಿಯಲ್ಲಿ ಪ್ರಾರಂಭಿಸಲಾಗಿದ್ದ ಆಧಾರ ಕೇಂದ್ರಕ್ಕೆ ಕಳೆದ ನಾಲ್ಕೈದು ದಿನಗಳಿಂದ ಬೀಗ ಜಡಿಯಲಾಗಿದೆ.
ಆಲಮಟ್ಟಿ, ನಿಡಗುಂದಿಯಲ್ಲಿಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಕಾರ್ಯನಿರ್ವಹಿಸುತ್ತಿದ್ದ ಆಧಾರ ಚೀಟಿ ಭಾವಚಿತ್ರ ತೆಗೆಯುವ ಕೇಂದ್ರ ಬಂದ್ ಆಗಿದೆ. ಆಧಾರ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ವೇತನ ನೀಡಿಲ್ಲ.
ಹೀಗಾಗಿ ಅವರೆಲ್ಲರೂ ಸೇರಿ ಈ ಕಾರ್ಯನಿರ್ವಹಿಸುವುದಿಲ್ಲ ಎಂಬ ತೀರ್ಮಾನ ಕೈಗೊಂಡು ಆಧಾರ ಕೇಂದ್ರಕ್ಕೆ ಬೀಗ ಜಡಿದು, ಬಾಗಿಲಿಗೆ ತಾವು ಬಂದ್ ಮಾಡಿದ ಕಾರಣದ ಸೂಚನೆಯುಳ್ಳ ಪೋಸ್ಟರ್ನ್ನು ಅಂಟಿ ಸಿದ್ದಾರೆ. ಇದು ಅನಿರ್ದಿಷ್ಟ ಬಂದ್ ಎಂದು ಅವರು ತಮ್ಮ ಪೋಸ್ಟರ್ನಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರಕಾರದ ಮಹತ್ವಾ ಕಾಂಕ್ಷಿಯ ಈ ಆಧಾರ ಗುರುತಿನ ಚೀಟಿ, ಪ್ರಾಥಮಿಕ ಹಂತದಲ್ಲಿಯೇ ವಿಫಲ ವಾಗುತ್ತಿದೆ. ಸಮರ್ಪಕ ಕಾರ್ಯನಿರ್ವ ಹಣೆಯಲ್ಲಿ ಮೂಡಿದ ಗೊಂದಲ, ನಂತರ ವೇತನ ನೀಡದ್ದಕ್ಕೆ ಕೇಂದ್ರಗಳು ಬಂದಾಗಿವೆ. ಕೇಂದ್ರ ಸರ್ಕಾರದ ಯೋಜನೆಯೇ ಹೀಗಾದರೆ ಹೇಗೆ ಎಂಬುದು ಗ್ರಾಮಸ್ಥರ ದೂರು.
ಆಲಮಟ್ಟಿ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಪ್ರತಿನಿತ್ಯ ಈ ಕೇಂದ್ರಕ್ಕೆ ಆಗಮಿಸಿ ಭಾವಚಿತ್ರ ತೆಗೆಸಿಕೊಳ್ಳುತ್ತಿದ್ದರೂ. ಆದರೇ ಯಾವುದೇ ಮುನ್ಸೂಚನೆ ಇಲ್ಲದೇ ಆಧಾರ ಸಿಬ್ಬಂದಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಇದರಿಂದಾಗಿ ಪ್ರತಿನಿತ್ಯ ನೂರಾರು ಜನರು ಆಧಾರ ಕೇಂದ್ರಕ್ಕೆ ಆಗಮಿಸಿ ಮರಳಿ ಹೋಗುವ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದ ನಾಗರಿಕರಿಗೆ ತೀವ್ರ ತೊಂದರೆಯಾಗಿದೆ.
ನೌಕರರ ವೇತನ ಸಮಸ್ಯೆಯನ್ನು ಬಗೆಹರಿಸಿ, ಮತ್ತೆ ಯಥಾ ಪ್ರಕಾರ ಆಧಾರ ಕೇಂದ್ರ ಕಾರ್ಯ ಆರಂಭ ಮಾಡುವಂತೆ ಗ್ರಾಮಸ್ಥರಾದ ನಿಸ್ಸಾರ್ ನದಾಫ್, ಈರನಗೌಡ ತಿಪ್ಪನಗೌಡರ, ಅನಿಲ ಕ್ಷೀರಸಾಗರ, ಪ್ರಭು ಹಿರೇಮಠ, ಗಿರೀಶ ಮರೋಳ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.