ADVERTISEMENT

ನಡಹಳ್ಳಿ ಅವರ ತಾಜ್‌ಮಹಲ್ ಎಲ್ಲಿ?

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 8:53 IST
Last Updated 23 ಏಪ್ರಿಲ್ 2013, 8:53 IST

ವಿಜಾಪುರ: `ದೇವರ ಹಿಪ್ಪರಗಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ಗೋಲಗುಮ್ಮಟ ಮತ್ತು ತಾಜ್ ಮಹಲ್‌ಗಳನ್ನು ನಿಮ್ಮೂರಿಗೇ ತರುತ್ತೇನೆ ಎಂಬಂತೆ ಸಾಕಷ್ಟು ಭರವಸೆ ನೀಡಿದ್ದರು. ಆಯ್ಕೆಯಾದ ನಂತರ ಕ್ಷೇತ್ರದ ಜನರನ್ನು ಮರೆತರು' ಎಂದು ದೇವರ ಹಿಪ್ಪರಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ (ಸಾಸನೂರ) ಆರೋಪಿಸಿದರು.

ಬಸವನ ಬಾಗೇವಾಡಿ ಹಾಗೂ ದೇವರ ಹಿಪ್ಪರಗಿ ಕ್ಷೇತ್ರಗಳ ಅಭ್ಯರ್ಥಿ ಗಳ ಪರವಾಗಿ ಸೋಮವಾರ ಬಸವನ ಬಾಗೇವಾಡಿಯಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಅಧ್ಯಕ್ಷ ರಾಜನಾಥ ಸಿಂಗ್‌ರ ಪ್ರಚಾರ ಸಭೆಯಲ್ಲಿ ಮಾತನಾಡಿದರು.

`ಪ್ರತಿ ಗ್ರಾಮದಲ್ಲಿ ಎರಡು ಎಕರೆ ಜಮೀನು ಖರೀದಿಸಿ ಮಹಿಳೆಯರಿಗೆ ಶೌಚಾಲಯ ನಿರ್ಮಿಸುತ್ತೇನೆ. ಕಾರ್ಖಾನೆಗಳನ್ನು ಸ್ಥಾಪಿಸಿ 10 ಸಾವಿರ ಜನರಿಗೆ ಉದ್ಯೋಗ ನೀಡುತ್ತೇನೆ ಎಂಬ ಭರವಸೆಗಳನ್ನು ನೀಡಿ ಮತ ಪಡೆದು ಆಯ್ಕೆಯಾದರು. ನಂತರ ಇತ್ತ ಬರಲೇ ಇಲ್ಲ' ಎಂದು ದೂರಿದರು.

`ಕಳೆದ ನಾಲ್ಕೂವರೆ ವರ್ಷದಲ್ಲಿ ನಾನು ಕ್ಷೇತ್ರದ ಜನತೆಯೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು, ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿ ಸಿದ್ದೇನೆ. ಆಸೆಗೆ ಬಲಿಯಾಗಬೇಡಿ. ಸುಳ್ಳು ಹೇಳುವವರಿಗೆ ಮತ್ತೆ ಬಲಿ ಬೀಳ ಬೇಡಿ' ಎಂದು ಮತದಾರರಿಗೆ ಮನವಿ ಮಾಡಿದರು.

ಪಕ್ಷದ ಅಧ್ಯಕ್ಷ ರಾಜನಾಥ ಸಿಂಗ್, ಬಸವನ ಬಾಗೇವಾಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಕೆ. ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ, ಬಿಜೆಪಿ ಮುಖಂಡರಾದ ಶಿವಾನಂದ ಕಲ್ಲೂರ, ಬಸವರಾಜ ಕುಂಬಾರ, ಶಿವಾನಂದ ಅವಟಿ, ರಾಜು ಮಗಿಮಠ, ಬಾಳನಗೌಡ ಪಾಟೀಲ, ಸಂಗನಗೌಡ ರಾಯಗೊಂಡ, ಪದ್ಮಾವತಿ ಗುಡಿ, ರೇಣುಕಾ ಇತರರು ವೇದಿಕೆಯಲ್ಲಿದ್ದರು.

ಬಿಜೆಪಿ ಸೇರ್ಪಡೆ: ದೇವರ ಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ ನೇತೃತ್ವದಲ್ಲಿ ಅರೇಶಂಕರ ಗ್ರಾಮದ ಮುಖಂಡರಾದ ವೆಂಕಟೇಶ್ ಕುಲಕರ್ಣಿ, ಕರಿಯಪ್ಪ ಗೋಡಿಕಾರ, ಬಸಯ್ಯ ಹಿರೇಮಠ, ಬಸವರಾಜ ಸಜ್ಜನ, ಲಕ್ಕಪ್ಪ ಮೇಟಿ ಇತರರು ಬಿಜೆಪಿ ಸೇರ್ಪಡೆಯಾದರು.

ಬೈಕ್ ರ‌್ಯಾಲಿ
ಬಸವನಬಾಗೇವಾಡಿ: ಪಟ್ಟಣಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥಸಿಂಗ್ ಆಗಮಿಸುವ ಮುನ್ನ ಬಿಜೆಪಿ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ‌್ಯಾಲಿ ನಡೆಸಿದರು.

ಬಿಜೆಪಿ ಯುವ ಮುಖಂಡ ಸಂಗಮೇಶ ವಾಡೇದ ನೇತೃತ್ವದಲ್ಲಿ  ಬಸವ ಜನ್ಮಸ್ಮಾರಕದಿಂದ ಆರಂಭವಾದ ಬೈಕ್ ರ‌್ಯಾಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಗುರುಕೃಪಾ ವಿದ್ಯಾಸಂಸ್ಥೆ ಆವರಣಕ್ಕೆ ತೆರಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.