ಸಿಂದಗಿ: ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದರಿಂದ ಗ್ರಾಮಸ್ಥರು ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಖಾಲಿ ಕೊಡಗಳನ್ನು ಪ್ರದರ್ಶಿಸಿ ಗ್ರಾಮ ಪಂಚಾಯಿತಿ ವಿರುದ್ಧ ಪ್ರತಿಭಟಿಸಿದ ಘಟನೆ ಸಿಂದಗಿ ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ.
ಜೋಡುಗುಡಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಹಳೇ ಗ್ರಾಮ ಪಂಚಾಯತಿ ಕಾರ್ಯಾಲಯದ ಎದುರು ಕೆಲ ಕಾಲ ಧರಣಿ ನಡೆಸಲಾಯಿತು.
ಕರವೇ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ರಾಜು ಅಡಕಿ, ಪ್ರವೀಣ ಜಗಶೆಟ್ಟಿ, ಬಾಬು ಬಡೇಮಗೋಳ ಮಾತನಾಡಿದರು.
ಗ್ರಾಮದಲ್ಲಿ ತಿಂಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಇದರಿಂದಾಗಿ ಗ್ರಾಮಸ್ಥರು ದೂರದ ಭಾವಿಗಳಿಂದ ನೀರು ಹೊತ್ತು ತರಬೇಕಾದ ದುಃಸ್ಥಿತಿ ಇದೆ.
ಬಿಸಿಲಿನ ತಾಪ ಮತ್ತು ವಿದ್ಯುತ್ ಅಭಾವದಿಂದ ನೀರು ತರುವುದೂ ಕಷ್ಟವಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಹೋರಾಟ ಅನಿವಾರ್ಯ ವಾಗಲಿದೆ ಎಂದಿದ್ದಾರೆ.
ಪ್ರತಿಭಟನೆಯಲ್ಲಿ ಕರವೇ ಗ್ರಾಮ ಘಟಕದ ಅಧ್ಯಕ್ಷ ಎಸ್.ಬಿ. ಮೋಪಗಾರ, ಭೀಮಣ್ಣ ಸಜ್ಜನ, ಮಹಿಬೂಬ್ ಮುಲ್ಲಾ, ಗಂಗಾಧರ ಪಟ್ಟಣಶೆಟ್ಟಿ, ಅನಿಲ ಕಪ್ಪಡಿಮಠ, ಮಡಿವಾಳಪ್ಪ ವಾಲಿಕಾರ, ರಫೀಕ್ ಮಂದೇವಾಲಿ, ಅಲ್ಲಾಭಕ್ಷ ಹೊಸಮನಿ, ರಾಜು ಶಿರಸಗಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.