ADVERTISEMENT

ನೀರು ಪೂರೈಕೆ: ತೊಂದರೆಯಾಗದಿರಲಿ

ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್‌ ಕಟ್ಟುನಿಟ್ಟಿನ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2016, 6:33 IST
Last Updated 29 ಜನವರಿ 2016, 6:33 IST
ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಲು ಇಂಡಿ ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್‌ ಮಾತನಾಡಿದರು
ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಲು ಇಂಡಿ ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್‌ ಮಾತನಾಡಿದರು   

ಇಂಡಿ:  ಮಳೆಯ ಅಭಾವದಿಂದ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಕಂಡು ಬರುತ್ತಿದ್ದು, ಬರುವ ಜೂನ್ ತಿಂಗಳವರೆಗೆ ಜನ ಹಾಗೂ ಜಾನುವಾರುಗಳಿಗೆ ಎಲ್ಲಿಯೂ ಕುಡಿಯುವ ನೀರಿನ ತೊಂದರೆಯಾಗದಂತೆ ತಾಲ್ಲೂಕು ಅಧಿಕಾರಿಗಳು ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕು ಎಂದು  ಜಿಲ್ಲಾಧಿಕಾರಿ ಡಿ.ರಂದೀಪ್‌  ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ  ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾವುದೇ ಗ್ರಾಮ, ವಸತಿ ಹಾಗೂ ತಾಂಡಾಗಳಲ್ಲಿ ಕುಡಿಯುವ ನೀರಿನ ತೊಂದರೆ ಇರುವುದು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳು ಆ ಗ್ರಾಮದ ಜನಸಂಖ್ಯೆ ಹಾಗೂ ಗ್ರಾಮದಲ್ಲಿರುವ ದನ ಕರುಗಳ ಸಂಖ್ಯೆ ಮತ್ತು ಅದಕ್ಕೆ ತಕ್ಕಂತೆ ಅಲ್ಲಿ ದಿನಕ್ಕೆ ತಗಲುವ ಕುಡಿಯುವ ನೀರಿನ ಪ್ರಮಾಣದ ಬೇಡಿಕೆಯ ಮನವಿಯನ್ನು ಕೂಡಲೇ ತಹಶೀಲ್ದಾರರಿಗೆ ಸಲ್ಲಿಸಬೇಕು ಎಂದರು.

ಸಮಸ್ಯೆ ಇರುವ ಗ್ರಾಮದ ಸಮೀಪ ಎಲ್ಲಿಯಾದರೂ ನೀರಿನ ಸೌಲಭ್ಯವಿದೆಯೋ? ಹಾಗಾದರೆ ಎಲ್ಲಿಂದ ನೀರು ತರಲು ಸಾಧ್ಯವಿದೆ. ಇಲ್ಲದಿದ್ದರೆ ಪರ್ಯಾಯ ಏನು ಎಂಬುದನ್ನು ತಿಳಿಸಬೇಕು. ಒಂದು ವೇಳೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡ ಬೇಕು ಎಂದಾದರೆ ಅವರಿಗೆ ನೀರು ಸಮೀಪ ಎಲ್ಲಿ ಸಿಗುತ್ತದೆ ಎಂಬುದನ್ನು ತಿಳಿಸಬೇಕು. ಅಲ್ಲದೇ 10 ಕಿ.ಮೀ.ಗಿಂತ ದೂರದಿಂದ ನೀರು ತರಬೇಕಾಗಿದ್ದರೆ ಅಂಥ ಗ್ರಾಮಗಳ ಬಗ್ಗೆಯೂ ತಿಳಿಸ ಬೇಕು ಎಂದು ಸೂಚಿಸಿದರು.

ನೀರು ಪೂರೈಕೆ ಮಾಡದೇ ಟ್ರಿಪ್‌ಗಳ ಬಗ್ಗೆ ಲೆಕ್ಕ ತೋರಿಸಿದರೆ ಅಂಥ ಅಧಿ ಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ. ಎಲ್ಲಿಯೂ ಅವ್ಯವಹಾರ ಆಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು.

ಟ್ಯಾಂಕರ್‌ಗಳಿಂದ ನೀರು ಪೂರೈಕೆ ಮಾಡಿದ ಮಾಲೀಕರಿಗೆ ವಿಳಂಬ ಮಾಡದೆ ಕೂಡಲೇ ಬಿಲ್‌ ಪಾವತಿಸಲು  ತಹಶೀಲ್ದಾರರಿಗೆ ಸೂಚಿಸಿದರು.
ಈಗಾಗಲೇ 90 ದಿನ ಸತತವಾಗಿ ಟ್ಯಾಂಕರ್‌ಗಳಿಂದ ನೀರು ಪೂರೈಸಿದ್ದರೆ ಅಂಥ ಗ್ರಾಮದ ಬಗ್ಗೆ ತಿಳಿಸಬೇಕು. 90 ದಿನಕ್ಕಿಂತ ಹೆಚ್ಚಿಗೆ ಪೂರೈಸಲು ಸರ್ಕಾರದಿಂದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ ಎಂದರು.

ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಇರುವ ಕುಡಿಯುವ ನೀರಿನ ತೊಂದರೆಯನ್ನು ಹಾಗೂ ಈಗಾಗಲೇ ಟ್ಯಾಂಕರ್‌ಗಳಿಂದ ನೀರು ಪೂರೈಸುತ್ತಿರುವ ಗ್ರಾಮಗಳು ಹಾಗೂ ಹೆಚ್ಚಿಗೆ ಟ್ಯಾಂಕರ್‌ಗಳ ಅವಶ್ಯಕತೆಯಿದೆಯೇ ಎಂಬ ಕುರಿತು ಆಯಾ ಗ್ರಾಮ ಪಂಚಾಯ್ತಿಗಳ ಪಿಡಿಒ ಗಳಿಂದ ಮಾಹಿತಿಯನ್ನು ಪಡೆದು ಈಗಾ ಗಲೇ ನೀರು ಪೂರೈಸುತ್ತಿರುವ ಟ್ಯಾಂಕರ್‌ಗಳ ಮಾಲೀಕರಿಗೆ  ಬಿಲ್ಲು ಪಾವತಿಸಲಾಗಿದೆಯೋ ಇಲ್ಲವೋ ಎಂಬ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಎಲ್ಲಿಯೂ ಕುಡಿಯುವ ನೀರಿನ ತೊಂದರೆಯಾಗದಂತೆ ನಿಗಾ ವಹಿಸಬೇಕು ಎಂದು ಸೂಚಿಸಿದರು.

ಪಿಡಿಓ, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರುಗಳು, ಕಂದಾಯ ಅಧಿಕಾರಿಗಳು ಇದ್ದರು.

ಉಪವಿಭಾಗಾಧಿಕಾರಿ ಪ್ರಕಾಶ ರಜಪೂತ ಉಪಸ್ಥಿತರಿದ್ದರು. ತಹಶೀಲ್ದಾರ್ ಆರ್.ಆರ್.ಕೊಂಡಗೂಳಿ ಸ್ವಾಗತಿಸಿದರು. ತಾ.ಪಂ.ಕಾ.ನಿ.ಅಧಿಕಾರಿ ರಾಜಕುಮಾರ ತೊರವಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.