ಆಲಮಟ್ಟಿ: ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ನೀರನ್ನು ಹಿತಮಿತವಾಗಿ ಬಳಸಿಕೊಳ್ಳಲು ಹಾಗೂ ಲಭ್ಯತೆಗೆ ಅನುಗುಣವಾಗಿ ಕಾಲುವೆಗೆ ನೀರು ಹರಿಸಲು ಇಂದು ಆಲಮಟ್ಟಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಬಾರಿ ನೀರಿನ ತೀವ್ರ ಕೊರತೆ ಇರುವ ಕಾರಣ ಹೆಚ್ಚು ನೀರು ಬಳಸುವ ಭತ್ತ ಹಾಗೂ ಕಬ್ಬನ್ನು ಬೆಳೆಯದೇ ಕೇವಲ ಮೂರು ತಿಂಗಳೊಳಗೆ ಬರುವ ಸೂರ್ಯಕಾಂತಿ ಸೇರಿದಂತೆ ಇನ್ನೀತರ ಬೆಳೆಗಳನ್ನು ಬೆಳೆಯಿರಿ ಎಂದು ರೈತರಲ್ಲಿ ಜಾಗೃತಿ ಮೂಡಿಸಲು ಕೃಷಿ ಅಧಿಕಾರಿಗಳು ತಿಳಿಸಿದರು.
2012-13 ನೇ ಸಾಲಿನಲ್ಲಿ ತಿಮ್ಮಾಪೂರ ಏತ ನೀರಾವರಿಯನ್ನು ಹೊಸದಾಗಿ ಸೇರಿಸಿ ಒಟ್ಟಾರೇ 5,72,000 ಹೆಕ್ಟೇರ್ಪ್ರದೇಶಕ್ಕೆ ನೀರು ಹರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಅಧಿಕಾರಿಗಳು ತರಾಟೆಗೆ
ಕಳೆದ ಬಾರಿ ವಿವಿಧ ಕಾಲುವೆಗಳಿಗೆ ಟೇಲ್ ಎಂಡ್ ವರೆಗೆ ನೀರು ಹರಿದಿದೆಯೇ, ಹಿಂದಿನ ಸಭೆಯ ನಡಾವಳಿಗೂ ಎಷ್ಟರ ಮಟ್ಟಿಗೆ ಜಾರಿಗೆ ಬಂದಿವೆ ಎಂದು ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಪ್ರಶ್ನಿಸಿದಾಗ, ಅದಕ್ಕೆ ಸಮರ್ಪಕ ಉತ್ತರ ನೀಡುವಲ್ಲಿ ತಡಬಡಾಯಿಸಿದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
`ನಾವೇನು ಇಲ್ಲಿ ಚಹಾ ಕುಡಿದು, ಹರಟೆ ಹೊಡೆದು ಮನೆಗೆ ಹೋಗಲು ಬರುತ್ತೇವೆಯೇ..?~ ಎಂದು ಖಾರವಾಗಿ ಪ್ರಶ್ನಿಸಿದ ಅವರು, ಅಧಿಕಾರಿಗಳು ಅಗತ್ಯ ತಯಾರಿಯೊಂದಿಗೆ ಸಭೆಗೆ ಆಗಮಿಸಬೇಕು ಎಂದರು.
ಕಾಲುವೆಗಳಲ್ಲಿ ನೀರು ಹರಿಯುವಾಗ ಬೃಹತ್ ಪಂಪಸೆಟ್ ಅಳವಡಿಸಿ ಕಾಲುವೆಯಿಂದ ನೀರನ್ನು ಪಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿದ್ದು ನ್ಯಾಮಗೌಡ ಒತ್ತಾಯಿಸಿದಾಗ, ಅದಕ್ಕಿಂತಲೂ ಮೊದಲು ಕಾಲುವೆಯನ್ನು ಹಾಗೂ ಅವುಗಳ ಗೇಟ್ಗಳನ್ನು ಒಡೆಯುವವರನ್ನು ಬಂಧಿಸಿ ಎಂದು ಅಪ್ಪು ಸೂಚಿಸಿದರು.
ನೀರು ಬಳಕೆದಾರರ ಸಂಘವನ್ನು ಕಡ್ಡಾಯವಾಗಿ ಸ್ಥಾಪಿಸಿ, ಕಾಲುವೆಯ ನಿರ್ವಹಣೆಯ ಜವಾಬ್ದಾರಿಯನ್ನು ಆ ಸಂಘಗಳಿಗೆ ಒಪ್ಪಿಸಿ ಎಂದು ಅಪ್ಪು ಸೂಚಿಸಿದರು. ಇದರ ಬಗ್ಗೆ ಪ್ರತಿಸಭೆಯಲ್ಲಿ ಚರ್ಚಿಸಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಪ್ಪು ಆರೋಪಿಸಿದರು.
ಕಾಲುವೆಯ ಕಾಮಗಾರಿಯ ಕ್ಲೋಸರ್ ಕೆಲಸ ಪೂರ್ಣಗೊಂಡರೂ, ಇನ್ನೂ ಕೆಲವೆಡೆ ಕಾಲುವೆಗಳು ದುರಸ್ತಿಗೊಂಡಿಲ್ಲ. ಅದಕ್ಕೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಅಪ್ಪು ಪ್ರಶ್ನಿಸಿದಾಗ ವಿವಿಧ ರೈತ ಮುಖಂಡರು ಅದಕ್ಕೆ ಧ್ವನಿಗೂಡಿಸಿದರು. ಕಾಲುವೆಯ ಕೊನೆಯ ಅಂಚಿನವರೆಗೂ ನೀರು ಹರಿಯಬೇಕು, ಅದಕ್ಕೆ ಅಡ್ಡಿಪಡಿಸುವ ರೈತರ ವಿರುದ್ಧ ಕ್ರಮ ಕೈಗೊಳ್ಳಿ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.