ವಿಜಯಪುರ: ಮದ್ಯದ ಅಮಲಿನಲ್ಲಿ ಶಾಲೆಗೆ ಬಂದು, ವಿದ್ಯಾರ್ಥಿಗಳ ಎದುರೇ ಅರೆಬೆತ್ತಲಾದ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬನನ್ನು ಸಿಂದಗಿ ತಾಲ್ಲೂಕು ಬೊಮ್ಮನಹಳ್ಳಿ ಗ್ರಾಮಸ್ಥರು ಸೋಮವಾರ ಥಳಿಸಿದ್ದಾರೆ. ಪ್ರಕರಣ ಮಂಗಳವಾರ ಬೆಳಕಿಗೆ ಬಂದಿದೆ.
ಎಸ್.ಎಂ.ಲೋಣಿ ಥಳಿತಕ್ಕೊಳಗಾದ ಶಿಕ್ಷಕ. ‘ಲೋಣಿ ಮದ್ಯವ್ಯಸನಿಯಾಗಿದ್ದ ಈತನಿಗೆ, ಮದ್ಯಪಾನ ಮಾಡಿ ಶಾಲೆಗೆ ಬರದಂತೆ ಮುಖ್ಯೋಪಾಧ್ಯಾಯರು ಹಾಗೂ ಗ್ರಾಮಸ್ಥರು ಹಲವು ಬಾರಿ ಎಚ್ಚರಿಸಿದ್ದರೂ ತನ್ನ ಚಾಳಿ ಬಿಟ್ಟಿರಲಿಲ್ಲ.
ಸೋಮವಾರ ವಿಪರೀತ ಕುಡಿದು, ತರಗತಿಯಲ್ಲಿ ಮಕ್ಕಳ ಮುಂದೆ ಅರೆ ಬೆತ್ತಲಾಗಿ ಓಡಾಡಿ, ಕೋಣೆಯ ಮೂಲೆಯೊಂದರಲ್ಲಿ ನಶೆಯಲ್ಲಿ ಮಲಗಿದ್ದ. ವಿಷಯ ತಿಳಿದ ಗ್ರಾಮದ ಯುವಕರು ಶಿಕ್ಷಕನನ್ನು ಹೊರಗೆಳೆದು ಸಾರ್ವಜನಿಕವಾಗಿ ಥಳಿಸಿದರು. ಅಲ್ಲದೇ ಅಮಾನತುಗೊಳಿಸುವಂತೆ ಆಗ್ರಹಿಸಿದರು’ ಎಂದು ಬೊಮ್ಮನಹಳ್ಳಿ ಗ್ರಾಮಸ್ಥರು ‘ಪ್ರಜಾವಾಣಿ’ಗೆ ತಿಳಿಸಿದರು.
ಶಿಕ್ಷಕ ಅಮಾನತು: ‘ಗ್ರಾಮಸ್ಥರು ಮೊಬೈಲ್ಗೆ ಕರೆ ಮಾಡಿ ವಿಷಯ ತಿಳಿಸಿದರು. ತಕ್ಷಣವೇ ಶಾಲೆಯ ಮುಖ್ಯೋಪಾಧ್ಯಾಯ, ಸ್ಥಳೀಯ ಸಿಆರ್ಸಿಯಿಂದ ಮಾಹಿತಿ ಪಡೆಯುವ ಜತೆಗೆ, ಲಿಖಿತ ಹೇಳಿಕೆ ತರಿಸಿಕೊಳ್ಳಲಾಯಿತು. ಅಸಭ್ಯವಾಗಿ ವರ್ತಿಸಿದ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ’ ಎಂದು ವಿಜಯಪುರ ಡಿಡಿಪಿಐ ಟಿ.ಪ್ರಸನ್ನಕುಮಾರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.